ADVERTISEMENT

ಅಧಿಕಾರಿ ಲೋಪ: ಅಮಾನತಿಗೆ ರೈತ ಸಂಘಟನೆ ಆಗ್ರಹ

ಸೌರ ವಿದ್ಯುತ್‌ ಘಟಕಕ್ಕಾಗಿ ಅಕ್ರಮವಾಗಿ ಮರಗಳ ಕಡಿತ ಪ್ರಕರಣ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:17 IST
Last Updated 7 ಫೆಬ್ರುವರಿ 2026, 2:17 IST
ಬೆಳಗಾವಿಯ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ರೈತ ಸಂಘಟನೆಯವರು, ಪರಿಸರವಾದಿಗಳು ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ
ಬೆಳಗಾವಿಯ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ರೈತ ಸಂಘಟನೆಯವರು, ಪರಿಸರವಾದಿಗಳು ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ತಾಲ್ಲೂಕಿನ ಬಡಾಲ ಅಂಕಲಗಿಯ ಕೌರಿಗುಡ್ಡದಲ್ಲಿ ಸೌರ ವಿದ್ಯುತ್ ಯೋಜನೆಗಾಗಿ ಶ್ರೀಗಂಧದ ಮರ ಸೇರಿ ವಿವಿಧ ಮರ ಅಕ್ರಮವಾಗಿ ಕಡಿಯುವುದನ್ನು ತಡೆಯದ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಅವರಿಂದಲೇ ನಷ್ಟ ವಸೂಲಿ ಮಾಡಬೇಕು’ ಎಂದು ಆಗ್ರಹಿಸಿ, ಇಲ್ಲಿನ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ರೈತ ಸಂಘಟನೆಯವರು, ಪರಿಸರವಾದಿಗಳು ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಅರಣ್ಯ ಇಲಾಖೆ ಪ್ರಕಾರ, ಬಡಾಲ ಅಂಕಲಗಿಯ ಕೌರಿಗುಡ್ಡದಲ್ಲಿನ ಗೋಮಾಳ ಭೂಮಿಯನ್ನು ಇಂಧನ ಇಲಾಖೆ ಉಪ ಆಯುಕ್ತರು ಪಿಎಂ-ಕುಸುಮ್ ಯೋಜನೆಯಡಿ ಹಂಚಿಕೆ ಮಾಡಿದ್ದಾರೆ. ಸೌರ ವಿದ್ಯುತ್ ಯೋಜನೆಗೆ ಹಂಚಿಕೆಯಾದ ಭೂಮಿಯಲ್ಲಿ ಮರ ಕಡಿಯಲು ಅನುಮತಿ ಕೋರಿ ಹೆಸ್ಕಾಂ ಹಿರೇಬಾಗೇವಾಡಿ ವಿಭಾಗ ಅರ್ಜಿ ಸಲ್ಲಿಸಿತ್ತು. ಆದರೆ, ಅರಣ್ಯ ಇಲಾಖೆ ಅನುಮತಿ ನೀಡದಿದ್ದರೂ ಎಂಟು ಎಕರೆಗೂ ಹೆಚ್ಚಿನ ಜಾಗದಲ್ಲಿದ್ದ  ಮರಗಳನ್ನು ಕಡಿಯಲಾಗಿದೆ’ ಎಂದು ದೂರಿದರು.

‘ದಟ್ಟ ಅರಣ್ಯವಾಗಿದ್ದರೂ, ಗೋಮಾಳ ಭೂಮಿಯನ್ನು ಹಂಚಿಕೆ ಮಾಡಿದ್ದಕ್ಕಾಗಿ ಬೆಳಗಾವಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಅವರನ್ನು ಬಂಧಿಸಬೇಕು. ಪ್ರಕೃತಿಗೆ ಉಂಟಾದ ನಷ್ಟಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಕಡಿಯಲಾದ ಮರಗಳ ವೆಚ್ಚವನ್ನು ಅವರಿಂದ ವಸೂಲಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಷ್ಟ್ರೀಯ ಪಕ್ಷಿ ನವಿಲು ಸೇರಿ ವಿವಿಧ ಜಾತಿಯ ಪಕ್ಷಿಗಳಿಗೆ ಈ ದಟ್ಟ ಕಾಡು ನೆಲೆಯಾಗಿದೆ. 1984ರಲ್ಲಿ ಬಡಾಲ ಅಂಕಲಗಿಯಲ್ಲಿ 600 ಎಕರೆ ಪ್ರದೇಶದಲ್ಲಿ ಸಸಿ ನೆಡಲಾಗಿತ್ತು. ಈಗ ಕಡಿಯಲಾದ ಮರಗಳು 40 ವರ್ಷಗಳಿಗಿಂತ ಹಳೆಯವು. ಶ್ರೀಗಂಧದ ಮರಗಳಷ್ಟೇ ಸರ್ಕಾರಕ್ಕೆ ₹500 ಕೋಟಿ ಆದಾಯ ತಂದುಕೊಡುತ್ತಿದ್ದವು. ಆದರೆ, ಮರ ಕಡಿದಿದ್ದು ಸರಿಯಲ್ಲ’ ಎಂದು ಆಪಾದಿಸಿದರು.

‘ಮರಗಳನ್ನು ಕಡಿಯಲಾದ ಭೂಮಿ ಗೋಮಾಳ ಭೂಮಿಯಾಗಿದೆ.  ಅರಣ್ಯವೆಂದು ಅದನ್ನು ದಾಖಲಿಸಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಇ.ಕ್ರಾಂತಿ ನೀಡಿರುವ ಹೇಳಿಕೆಯೂ ಸಮಂಜಸವಾಗಿಲ್ಲ’ ಎಂದು ದೂರಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಪ್ರಕಾಶ ನಾಯ್ಕ, ‘ಸೌರ ವಿದ್ಯುತ್ ಸ್ಥಾವರಕ್ಕಾಗಿ ಮಂಜೂರು ಮಾಡಿದ ಭೂಮಿ ನವಿಲಿನ ನೆಲೆಯಾಗಿದೆ. ಅಲ್ಲಿ ಕಡಿಯಲಾದ ಇತರ ಮರಗಳಲ್ಲಿ ಶ್ರೀಗಂಧವೂ ಸೇರಿದೆ. ಹಾಗಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಪ್ರೇಮ್‌ ಚೌಗಲಾ, ಶಿವನಗೌಡ ಪಾಟೀಲ, ಧನಂಜಯ ಜಾಧವ, ಜಗದೀಶ ಪೂಜಾರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.