ಬೆಳಗಾವಿ: ಇಲ್ಲಿನ ಶಾಹೂನಗರದ ‘ಯೂನಿವರ್ಸಲ್ ಶೋಟೊಕಾನ್ ಕರಾಟೆ ಡೋ–ಕರ್ನಾಟಕ’ದ ಪಟುಗಳು ಶಿವಮೊಗ್ಗದಲ್ಲಿ ಭಾನುವಾರದಿಂದ ಸೋಮವಾರದವರೆಗೆ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಶಿವಮೊಗ್ಗ ದಸರಾ ಭಾಗವಾಗಿ ಆಯೋಜಿಸಿದ್ದ ‘ಯುವ ದಸರಾ- 2021’ ಅಂಗವಾಗಿ ರಾಜ್ಯ ಕರಾಟೆ ಸಂಘ, ಶಿವಮೊಗ್ಗ ನಗರ ಕರಾಟೆ ಸಂಘ ಹಾಗೂ ನಗರಸಭೆ ಸಹಯೋಗದಲ್ಲಿ ಅಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರದ್ಧಾ ಸೂರ್ಯವಂಶಿ (11 ವರ್ಷದೊಳಗಿನವ ವಿಭಾಗ), ನವ್ಯಾ ಪಿಳ್ಳೈ (14 ವರ್ಷದೊಳಗಿನವರು), ಮಂಜಿರಿ ಜಿ.ಬಿ. (17 ವರ್ಷದೊಳಗಿನವರು) ಹಾಗೂ ಪಾರ್ಥ ಸೋನಾರ (19 ವರ್ಷದೊಳಗಿನವರ ವಿಭಾಗ) ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜ್ಯದ ವಿವಿಧ ಕರಾಟೆ ಸಂಘಗಳ 250 ಹುಡುಗರು ಮತ್ತು ಹುಡುಗಿಯರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ತರಬೇತುದಾರ ರಾಜು ರಜಪೂತ್ ಮಾರ್ಗದರ್ಶನದಲ್ಲಿ ಶಾಹೂನಗರದ ಕಾವೇರಿ ಸೂರ್ಯವಂಶಿ, ಶ್ರದ್ಧಾ ಸೂರ್ಯವಂಶಿ, ಆರ್ಯ ಊರಂಕರ, ಸಮೀಕ್ಷಾ ಶ್ರೀಜಿತ್, ನವ್ಯಾ ಪಿಳ್ಳೈ, ಮಂಜಿರಿ ಜಿ.ಬಿ., ಭಾವನಾ ಭಾತಕಾಂಡೆ, ತೀರ್ಥ ರಜಪೂತ್, ಎಂ. ನೂತನ್, ಶ್ರೇಯಸ್ ವನ್ನೂರ್, ಪಾರ್ಥ ಸೋನಾರ ವಿವಿಧ ವಯೋಮಾನದವರ ಪಂದ್ಯಗಳಲ್ಲಿ ಪಾಲ್ಗೊಂಡರು.
ವಿಜೇತರಿಗೆ ಸೋಮವಾರ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.