
ಚಿಕ್ಕೋಡಿ: ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಚಂದೂರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಸಕರ ಅನುದಾನದಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ ಮಾತನಾಡಿದರು.
’ಕಳೆದ 3-4 ದಶಕಗಳಿಂದ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನಷ್ಟು ಕೆಲಸ ಮಾಡುವ ಶಕ್ತಿಯನ್ನು ಭಗವಂತ ಅವರಿಗೆ ದಯಪಾಲಿಸಲಿ ಎಂದರು.
₹ 1.10 ಕೋಟಿ ಮೊತ್ತದಲ್ಲಿ ಚಂದೂರ-ಯಡೂರ ಮುಖ್ಯರಸ್ತೆ ಸುಧಾರಣೆ, ₹ 40 ಲಕ್ಷ ಮೊತ್ತದಲ್ಲಿ ಡಾ.ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ಹಾಗೂ ಶುದ್ಧ ಕುಡಿಯುವ ನೀರಿನ ನೂತನ ಘಟಕವನ್ನು ಶಾಸಕ ಗಣೇಶ ಹುಕ್ಕೇರಿ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿ, ’ಮಾರ್ಚ್ನಲ್ಲಿ ಯಡೂರ ಗ್ರಾಮದಲ್ಲಿ ಕೃಷ್ಣಾ ನದಿಯ ಮಹಾ ಆರತಿ, ಕುಂಭಮೇಳ, ಲಕ್ಷದೀಪೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿಗೆ ತಮ್ಮ ಸಹಕಾರವಿದೆ. ಯಡೂರ ಮಠದಿಂದ ಹಮ್ಮಿಕೊಳ್ಳಲಾಗುತ್ತಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಪ್ರಯತ್ನಸಲಾಗುತ್ತಿದೆ’ ಎಂದರು.
ಸದಲಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಶರದ್ ಪಾಟೀಲ, ಚಂದ್ರಕಾಂತ ಪಾಟೀಲ, ಸಿದ್ದಗೌಡ ಮಗದುಮ್ಮ, ಗೋಪಾಳ ಮಗದುಮ್ಮ, ಸಂತೋಷ ಕುಂಬಾರ, ಮಾರುತಿ ಕಾಂಬಳೆ, ಚೇತನ ಕಾಂಬಳೆ, ಮಲ್ಲಪ್ಪ ಧನಗರ, ಪೋಪಟ್ ಗುರವ, ಸಂಭಾಜಿ ಸಿಂಧೆ, ಸುಭಾಷ ಪಖಾಲೆ, ಶಶಿಕಾಂತ ಪಾಟೀಲ, ನಾಗು ದೋಣೆ, ಸಂಜಯ ಇಗಲೆ, ಅನಿಲ ಹಿರೇಕೂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.