ADVERTISEMENT

ಮೂಡಲಗಿ: ಮೂಡಲಗಿಗೆ ಸಹಕಾರ ನಗರದ ಸ್ಥಾನಮಾನ ನೀಡಿ

ಶಾಸಕ ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:19 IST
Last Updated 29 ಜನವರಿ 2023, 6:19 IST
ಮೂಡಲಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕಬ್ಬಿನ ಪೈರಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ಮೂಡಲಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕಬ್ಬಿನ ಪೈರಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ಮೂಡಲಗಿ: ‘ಬೆಳಗಾವಿ ಜಿಲ್ಲೆಯಲ್ಲಿಯೇ 72ಕ್ಕೂ ಅತೀ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿರುವ ಪಟ್ಟಣವನ್ನು ಸಹಕಾರ ನಗರ ಎಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ಒತ್ತಾಯಿಸುತ್ತೇನೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ಬಸವ ರಂಗ ಮಂಟಪದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಕಬ್ಬಿನ ಪೈರಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಹಕಾರಿ ಕ್ಷೇತ್ರ ಬಲಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು, ಪಿಕೆಪಿಎಸ್‌ಗಳ ಬಲವರ್ಧನೆಗಾಗಿ ರೈತರಿಗೆ ಪತ್ತನ್ನು ಹೆಚ್ಚಿಸುತ್ತಿದ್ದಾರೆ. ರೈತರಿಗೆ ಬಿಡಿಸಿಸಿ ಬ್ಯಾಂಕ್‌ನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಆತ್ಮನಿರ್ಭರ ಭಾರತದಲ್ಲಿ ದೇಶ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಸಹಕಾರಿಯಿಂದ ಸಮೃದ್ಧಿ ವರದಾನವಾಗಿದೆ. ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಕೇಂದ್ರದಲ್ಲಿ ಸಹಕಾರ ಖಾತೆ ಆರಂಭಿಸಿರುವ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ADVERTISEMENT

ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಸುಣಧೋಳಿಯ ಶಿವಾನಂದ ಸ್ವಾಮೀಜಿ ಮತ್ತು ಮುನ್ಯಾಳ-ರಂಗಾಪೂರದ ಡಾ.ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪಿಕೆಪಿಎಸ್‌ ಅಧ್ಯಕ್ಷ ಸಂದೀಪ ಸೋನವಾಲಕರ ಅಧ್ಯಕ್ಷತೆವಹಿಸಿದ್ದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಗೋವಿಂದಪ್ಪ ಸೋನವಾಲಕರ, ಬಿ.ಬಿ. ಹಂದಿಗುಂದ, ಬಸವಪ್ರಭು ನಿಡಗುಂದಿ, ಪಿಕೆಪಿಎಸ್ ಉಪಾಧ್ಯಕ್ಷೆ ನೀಲವ್ವಾ ಮಠಪತಿ, ನಿರ್ದೇಶಕರಾದ ತಿಪ್ಪಣ್ಣ ಕುರಬಗಟ್ಟಿ, ರವೀಂದ್ರ ಸಣ್ಣಕ್ಕಿ, ಶಿವಲಿಂಗಪ್ಪ ಗೋಕಾಕ, ಶ್ರೀಶೈಲ ಬಳಿಗಾರ, ಪ್ರಶಾಂತ ನಿಡಗುಂದಿ, ಮಾಯಪ್ಪ ಕಂಕಣವಾಡಿ, ಸಂಗಮೇಶ ಕೌಜಲಗಿ, ಮಲ್ಲಪ್ಪ ತಳವಾರ, ಮಾಯವ್ವ ಗುಡ್ಲಮನಿ, ಕರೆಪ್ಪ ನಾಯ್ಕ, ವೀರಣ್ಣಾ ಢವಳೇಶ್ವರ, ಮುಖ್ಯ ಕಾರ್ಯನಿರ್ವಾಹಕ ಹನಮಂತ ಶೆಕ್ಕಿ ಇದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಸತ್ಕರಿಸಲಾಯಿತು. ಅಮೃತ ಮಹೋತ್ಸವದ ಅಂಗವಾಗಿ ಮೂಡಲಗಿ ಪಿಕೆಪಿಎಸ್ ಹೊರತಂದಿರುವ ‘ಮೂಡಲ ಬೆಳಕು’ ಸ್ಮರಣ ಸಂಚಿಕೆ ಗಣ್ಯರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.