
ರಾಮದುರ್ಗ: ಭಾಗೋಜಿಕೊಪ್ಪ ಗ್ರಾಮಸ್ಥರ ದೇಣಿಗೆಯಿಂದ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಿರುವುದು ಮಾದರಿ ಕಾರ್ಯವಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಶ್ಲಾಘಿಸಿದರು.
ತಾಲ್ಲೂಕಿನ ಭಾಗೋಜಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‘ಎಪಿಜೆಡಿಜಿ ಲೋಕʼ ಗಣಕಯಂತ್ರ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, 21ನೇ ಶತಮಾನಕ್ಕೆ ಅಗತ್ಯವಾದ ಕೌಶಲಗಳನ್ನು ವಿದ್ಯಾರ್ಥಿಗಳು ಹೊಂದುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಮಠದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಇಂತಹ ಉಪಕ್ರಮಗಳು ಅವಶ್ಯಕವಾಗಿವೆ. ಕಂಪ್ಯೂಟರ್ ಬೋಧನೆಗೆ ಶಿಕ್ಷಕರನ್ನು ನೇಮಿಸಿಕೊಂಡರೆ, ಪ್ರತಿವರ್ಷ ಒಂದು ತಿಂಗಳ ಸಂಬಳವನ್ನು ಮಠದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗುರುಪುತ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುವಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಬಿ. ಅಣ್ಣಿಗೇರಿ, ಸಹಕಾರ್ಯದರ್ಶಿ ಕೆ.ಎಸ್. ರಾಚಣ್ಣವರ, ತಾಲ್ಲೂಕು ಕಾರ್ಯದರ್ಶಿ ಎಸ್. ವಿ.ಪಾಟೀಲ, ಉಪಾಧ್ಯಕ್ಷ ಎಸ್.ಬಿ. ಆಲಗುಂಡಿ, ಪಿಡಿಒ ಮಂಜುನಾಥ ದೇವರಡ್ಡಿ, ಶಿಕ್ಷಕರ ಸೊಸೈಟಿ ನಿರ್ದೇಶಕರಾದ ಎಫ್. ಎನ್. ಕುರಬೇಟ, ಜಿ.ಎಸ್. ಪಾಟೀಲ, ನಿವೃತ್ತ ಸೈನಿಕ ಅಶೋಕ ಕಪ್ಪತ್ತಿ, ನಿವೃತ್ತ ಶಿಕ್ಷಕರಾದ ಎನ್.ಎಂ. ಅಂಗಡಿ, ಆರ್.ವೈ.ನದಾಫ್, ಸಿಆರ್ಪಿಗಳಾದ ಪ್ರಕಾಶ ಜೇವೂರ, ವಿಠ್ಠಲ ದಳವಾಯಿ, ಶಿಕ್ಷಕರು ಮತ್ತು ಗ್ರಾಮಸ್ಥರು ಇದ್ದರು.
ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಆರ್. ವೈ. ಸಂಕ್ರಿ ಸ್ವಾಗತಿಸಿದರು. ಶಿಕ್ಷಕ ಅಶೋಕ ಬೂದಿ ಕಾರ್ಯಕ್ರಮ ನಿರೂಪಿಸಿದರು. ರಾಜು ಮುಗಳಿಹಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.