ರಾಯಬಾಗ: ಮತಕ್ಷೇತ್ರದ ಮತದಾರರ ಭವಿಷ್ಯದ ದಿನಗಳನ್ನು ಸುಂದರವಾಗಿಸಬೇಕೆನ್ನುವುದು ನನ್ನ ಅದಮ್ಯ ಬಯಕೆಯಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ₹6 ಕೋಟಿ ವೆಚ್ಚದಲ್ಲಿ ಮಂಗಸೂಳಿ - ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಮತಕ್ಷೇತ್ರದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿಯಾಗಿಲ್ಲದ ಮತ್ತು ವಾಹನ, ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳ ಮಾಹಿತಿ ಪಡೆದುಕೊಂಡಿದ್ದು, ಹಂತ ಹಂತವಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಾಗುವುದು’ ಎಂದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಹಳಿಂಗಳಿ, ಮುಖಂಡರಾದ ಸದಾಶಿವ ಘೋರ್ಪಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ,ಮಹೇಶ ಕರಮಡಿ, ಸಂಗಣ್ಣ ದತ್ತವಾಡೆ, ಸುರೇಶ ಮಾಳಿ, ಜಯಾನಂದ ಹಿರೇಮಠ, ಅನಿಲ ಕೊರವಿ, ಶ್ರೀಧರ ಕುಲಗುಡೆ, ರಿತೇಶ ಅವಳೆ, ಪ್ರೇಮ್ ಸಾನೆ,ಲೋಕೋಪಯೋಗಿ ಇಲಾಖೆಯ ಆರ್.ಬಿ.ಮನುವಡ್ಡರ, ಶ್ರೀಧರ ಮೆಗಲಮನಿ, ಗುತ್ತಿಗೆದಾರ ರಫೀಕ್ ತರಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.