ಬೆಳಗಾವಿ: ‘ಆಜಾನ್ ಮೂಲಕ ಆಗುತ್ತಿರುವ ಶಬ್ದಮಾಲಿನ್ಯ ತಡೆಯಬೇಕು. ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಒತ್ತಾಯಿಸಿ ಅಭಿಯಾನ ನಡೆಸುತ್ತಿರುವ ಶ್ರೀರಾಮ ಸೇನೆ ಕಾರ್ಯಕರ್ತರು, ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಹನುಮಾನ ಮಂದಿರದಲ್ಲಿ ಸೋಮವಾರ ಮುಂಜಾನೆ ಹನುಮಾನ ಚಾಲೀಸಾ ಪಠಿಸಿದರು.
ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸಿ ಆರತಿ ಮಾಡಿದ ಅವರು, ಧ್ವನಿವರ್ಧಕದ ಮೂಲಕ ಭಜನೆ ಹಾಕಿದರು. ಸೇನೆಯ ಬೆಳಗಾವಿ ಘಟಕದ ಅಧ್ಯಕ್ಷ ರವಿಕುಮಾರ ಕೋಕಿತಕರ್ ನೇತೃತ್ವ ವಹಿಸಿದ್ದರು.
ಡಿಸಿಪಿ ರವೀಂದ್ರ ಗದಾಡಿ, ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟೀಮನಿ ಹನುಮಾನ ದೇವಸ್ಥಾನ ಬಳಿ ಭೇಟಿ ನೀಡಿ ಪರಿಶೀಲಿಸಿದರು.
ಇದೇ ಮಾದರಿಯಲ್ಲಿ ಜಿಲ್ಲೆಯ ಕೆಲವು ದೇವಸ್ಥಾನಗಳಲ್ಲಿ ಹನುಮಾನ ಚಾಲೀಸ್, ಮಂತ್ರ ಪಠಣ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಬೆಳಗಾವಿ ನಗರ ವ್ಯಾಪ್ತಿಯಲ್ಲಿ 110ಕ್ಕೂ ಅಧಿಕ ಹಾಗೂ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಮಸೀದಿಗಳಿವೆ.ಮುನ್ನೆಚ್ಚರಿಕೆ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.