ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಮಳೆಯಿಂದ ತೊಂದರೆಗೊಳಗಾದ 25 ಕುಟುಂಬಗಳಿಗೆ ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕ ಉಪಾಧ್ಯಕ್ಷ, ಗ್ರಾಮದ ಹಿರಿಯ ಸಿ.ಕೆ. ಮೆಕ್ಕೇದ, ಯಶಸ್ವಿ ಟೌನ್ಶಿಪ್ ಕಂಪನಿ ಎಂಡಿ, ಉದ್ಯಮಿ ಅಣ್ಣಾಸಾಹೇಬ ಪಾಟೀಲ ಅವರು ₹ 2 ಲಕ್ಷ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸರ್ಕಾರವೇ ಎಲ್ಲವನ್ನು ಮಾಡಲಿ ಎನ್ನುವುದರ ಬದಲಿಗೆ, ನಾನೇನು ಮಾಡಲು ಸಾಧ್ಯವಿದೆ ಎನ್ನುವ ಚಿಂತನೆಯಿಂದ ಅವರು ನೆರವು ನೀಡಿದ್ದಾರೆ. ‘ಮನೆ ಬಿದ್ದು ಹಾನಿಗೊಳಗಾದ ಸಂತ್ರಸ್ತರಿಗೆ ಭರವಸೆಯ ಮಾತುಗಳಿಂದ, ಸಾಂತ್ವನದಿಂದ ತಾತ್ಕಾಲಿಕ ಸಮಾಧಾನ ಸಿಗಬಹುದು. ಆದರೆ, ಆತಂಕ ನಿವಾರಣೆಯಾಗುವುದಿಲ್ಲ. ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆಯಾದಂತೆ ಸಂತ್ರಸ್ತರಿಗೆ ನೆರವಾಗಿದ್ದೇವೆ. ಮನೆಯ ಗೋಡೆ ಕುಸಿದು ಬಿದ್ದವರಿಗೆ ₹ 10ಸಾವಿರದಿಂದ ಗೋಡೆ ಕಟ್ಟಿಸಿಕೊಳ್ಳಲು ಆಗದೇ ಇರಬಹುದು. ಆದರೆ ನಾನು ಗೋಡೆ ಕಟ್ಟಲು ಮುಂದಾಗಬೇಕೆನ್ನುವ ಧೈರ್ಯ ಬರುತ್ತದೆ’ ಎನ್ನುತ್ತಾರೆ ಅವರು.
ಈ ಹಣವನ್ನು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರ್ವತಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಸನಗೌಡ ಪಾಟೀಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಗಣ್ಣ ಭದ್ರಶೆಟ್ಟಿ, ಮುಖಂಡರಾದ ರಾಮನಗೌಡ ಕೊನಕುಪ್ಪಿ ಪಾಟೀಲ, ಹಿರಿಯರಾದ ಶಂಕರ ಕೋಟಗಿ, ಮಡಿವಾಳಪ್ಪ ತಡಸಲ, ಡಾ.ಪುನೀತ ಗಡ್ಡಿ, ಸುರೇಶ ಗಣಾಚಾರಿ, ಎಸ್.ಎಸ್. ಪಾಟೀಲ, ಗ್ರಾಮ ಪಂಚಾಯ್ತಿ ಸದಸ್ಯರಾದ ಭೀಮಣ್ಣ ಮುರಗೋಡ, ಈರಣಗೌಡ ಶೀಲವಂತರ, ತಾಲ್ಲೂಕು ಪಂಚಾಯ್ತಿ ಸದಸ್ಯ ಉಮೇಶಗೌಡ ಪಾಟೀಲ, ನಾಗಪ್ಪ ಫಕೀರನ್ನವರ, ಜಗದೀಶ ಜಕ್ಕಪ್ಪನವರ, ನಾಗಪ್ಪ ಸೊಂಟಕ್ಕಿ, ಸೋಮಪ್ಪ ಚಿಕ್ಕನ್ನವರ, ದ್ಯಾಮಣ್ಣ ಉಡಿಕೇರಿ, ಕುಮಾರ ಹೊಸೂರ, ಆನಂದ ಹಲಕಿ, ವೆಂಕಟೇಶ ಬಾಗಲ ಮೊದಲಾದವರು ವಿತರಿಸಿದರು.
‘ಸರ್ಕಾರ ಮಾಡಬೇಕಿರುವ ಕಾರ್ಯವನ್ನು ಮೆಕ್ಕೇದ, ಎ.ಎಸ್. ಪಾಟೀಲ ತಮ್ಮ ಕಂಪನಿ ವತಿಯಿಂದ ಬಡವರಿಗೆ ₹ 2 ಲಕ್ಷ ವಿತರಿಸಿರುವ ಕಾರ್ಯ ಶ್ಲಾಘನೀಯವಾಗಿದೆ’ ಎಂದು ಗ್ರಾಮದ ನಿವೃತ್ತ ಸೈನಿಕ ವೆಂಕಣ್ಣ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.