ಬೆಳಗಾವಿ: ‘ವಿದ್ಯಾರ್ಥಿಗಳು ಕ್ರಿಯಾಶೀಲತೆ ಬೆಳೆಸಿಕೊಂಡರೆ ಸರ್ವಾಂಗೀಣ ಉನ್ನತಿ ಸಾಧಿಸಬಹುದು’ ಎಂದು ಆರ್.ಪಿ.ಡಿ. ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ ಹೇಳಿದರು.
ಇಲ್ಲಿನ ರಾಣಿ ಪಾರ್ವತಿದೇವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ಅಂತರಕಾಲೇಜು ವಿದ್ಯಾರ್ಥಿ ಯುವಜನೋತ್ಸವ ‘ಹೆರಿಟೇಜ್–2020‘ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಜಗತ್ತು ಸ್ಪರ್ಧಾತ್ಮಕ ವಿದ್ಯಮಾನದಿಂದ ಕೂಡಿದೆ. ಇಂತಹ ಸಂಧರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕೌಶಲಗಳನ್ನು ಬಳಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.
‘ಸ್ಪರ್ಧೆಗಳಲ್ಲಿ ಸೋಲು– ಗೆಲುವು ಮುಖ್ಯವಲ್ಲ. ಪಾಲ್ಗೊಂಡು ಪ್ರತಿಭೆಯನ್ನು ಹೊರಹಾಕುವುದು ಅತ್ಯಂತ ಪ್ರಮುಖವಾಗಿದೆ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎ.ಎ. ದೇಸಾಯಿ ಹೇಳಿದರು.
ಈ ಸಂದರ್ಭದಲ್ಲಿ‘ಹೆರಿಟೇಜ್’ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು.ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ. ಕೋಲಕಾರ ಇದ್ದರು.
ಸಂಜನಾ ಪೋವಾರ ಸ್ಪರ್ಧೆಯ ಮಾಹಿತಿ ನೀಡಿದರು. ಐಶ್ವರ್ಯಾ ಹೊಸೂರ ಸ್ವಾಗತಿಸಿದರು. ಧನಶ್ರೀ ಕೊರಾಟೆ ಪರಿಚಯಿಸಿದರು. ಸಲೋನಿ ಪಾಟೀಲ ಹಾಗೂ ದೇವಯಾನಿ ಶಾಹಪುರಕರ ನಿರೂಪಿಸಿದರು. ವಾಣಿ ಚಿನ್ನಪ್ಪಗೌಡರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.