ಬೆಳಗಾವಿ: ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಹೆಚ್ಚಿಸಲು ‘ಗ್ರೀನ್ಫೀಲ್ಡ್’ ಯೋಜನೆಗೆ ಜಿಲ್ಲೆಯ ಎಂಟು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಎಂಟೂ ಗ್ರಾಮಗಳನ್ನು ‘ಹೆಸ್ಕಾಂ ಮಾದರಿ ಸೌರಗ್ರಾಮ’ ಎಂದು ಘೋಷಿಸಲಾಗುತ್ತಿದೆ.
ಈ ಯೋಜನೆಯಡಿ ಹೊಸ 110 ಕೆವಿ ವಿದ್ಯುತ್ ಸಬ್ಸ್ಟೇಷನ್ಗಳನ್ನು ಸ್ಥಾಪಿಸುವುದು, ಎಲ್ಲ ಎಂಟೂ ಕಡೆ ಸೌರ ವಿದ್ಯುತ್ ಸ್ಥಾವರ ನಿರ್ಮಿಸುವುದು, ಗ್ರಾಮೀಣ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೌರವಿದ್ಯುತ್ಗೆ ಉತ್ತೇಜನ ನೀಡುವುದು ಕೂಡ ಇದರಲ್ಲಿ ಸೇರಿದೆ.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಸಭೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈ ನಿರ್ಧಾರ ತೆಗೆದುಕೊಂಡರು. ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ (ತಾಂತ್ರಿಕ) ಇದರ ಬಗ್ಗೆ ತಿಳಿಸಲಾಯಿತು.
ನಿಪ್ಪಾಣಿ ತಾಲ್ಲೂಕಿನ ಅಪ್ಪಚಿವಾಡಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಬ್ಸ್ಟೇಷನ್ ಸ್ಥಾಪಿಸುವ ಬೇಡಿಕೆ ಇತ್ತು. ಈ ಸಮಸ್ಯೆಯನ್ನು ಸಚಿವ ಸತೀಶ ಜಾರಕಿಹೊಳಿ ಅವರ ಬಳಿಯೂ ಪ್ರಸ್ತಾಪಿಸಲಾಯಿತು. ಅಪ್ಪಚಿವಾಡಿ ಮತ್ತು ಜಿಲ್ಲೆಯ ಇತರ ಎಂಟು ಸ್ಥಳಗಳ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು, ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯ ಇಂಧನ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದ್ದರು. ಅಸಾಂಪ್ರದಾಯಿಕ ಇಂಧನ ಮೂಲಗಳನ್ನು ಹೆಚ್ಚಿಸಲು ಹಸಿರು ಕ್ಷೇತ್ರ ಯೋಜನೆ ಅನುಷ್ಠಾನಗೊಂಡ ನಂತರ, ಅಪ್ಪಚಿವಾಡಿ ಸೇರಿದಂತೆ ಜಿಲ್ಲೆಯ ಎಂಟು ಸ್ಥಳಗಳಲ್ಲಿ 110 ಕೆವಿ ಸಬ್ಸ್ಟೇಷನ್ಗಳನ್ನು ನಿರ್ಮಿಸಲು ಜಾರಕಿಹೊಳಿ ಮುಂದಾದರು.
ಈ ಯೋಜನೆ ಅಡಿ ಹೆಸ್ಕಾಂ ಆವರಣದಲ್ಲಿ ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸಲಾಗುವುದು. ಹೊಸ ಸಬ್ಸ್ಟೇಷನ್ಗಳ ನಿರ್ಮಾಣದ ನಂತರ, ಅಸ್ತಿತ್ವದಲ್ಲಿರುವ ಸಬ್ಸ್ಟೇಷನ್ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಪ್ಪಚಿವಾಡಿ ಮತ್ತು ಕೊಗ್ನೋಲಿ ಪ್ರದೇಶಗಳಲ್ಲಿ ವಿದ್ಯುತ್ ಪಂಪ್ಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ, ಅಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಈ ಹೊಸ ಯೋಜನೆಯೊಂದಿಗೆ, ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದು ಸಚಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಂಟು ವಿದ್ಯುತ್ ಉಪಕೇಂದ್ರಗಳಲ್ಲಿ, ಸವದತ್ತಿ ತಾಲ್ಲೂಕಿನ ಮುರಗೋಡದಲ್ಲಿ ಪ್ರಸ್ತುತ 33/11 ಕೆವಿ ಸಾಮರ್ಥ್ಯದ ಸಬ್ಸ್ಟೇಷನ್ ಇದ್ದು, ಹೊಸ ಗ್ರೀನ್ ಫೀಲ್ಡ್ ಯೋಜನೆಯ ಮೂಲಕ ಆ ಸಬ್ಸ್ಟೇಷನ್ನ ಸಾಮರ್ಥ್ಯವನ್ನು 110 ಕೆವಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ನಿಪ್ಪಾಣಿ ತಾಲ್ಲೂಕಿನ ಅಪ್ಪಾಚಿವಾಡಿ ಗೋಕಾಕ ತಲ್ಲೂಕಿನ ಪಾಮಲದಿನ್ನಿ ಸವದತ್ತಿ ಜಾಕ್ವೆಲ್ ಸವದತ್ತಿ ತಾಲ್ಲೂಕಿನ ಮುರಗೋಡ ಬೈಲಹೊಂಗಲ ತಾಲ್ಲೂಕಿನ ಗಣಿಕೊಪ್ಪ ಮೂಡಲಗಿ ತಾಲ್ಲೂಕಿನ ಪಿ.ವೈ.ಹುಣಶ್ಯಾಳ ಹುಕ್ಕೇರಿ ತಾಲ್ಲೂಕಿನ ಪಾಚ್ಚಾಪುರ ಕೆಂಚನಹಟ್ಟಿ.
‘ರಾಜ್ಯದಲ್ಲಿ ಎರಡು ಹಂತಗಳಲ್ಲಿ ‘ಗ್ರೀನ್ಫೀಲ್ಡ್’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಬೆಳಗಾವಿ ಜಿಲ್ಲೆ ಸೇರಿದೆ. ಇದರ ಮೂಲಕ ಕೆಪಿಟಿಸಿಎಲ್ ರಾಜ್ಯದಲ್ಲಿ ಗ್ರೀನ್ ಎನರ್ಜಿ ಕಾರಿಡಾರ್ ರಚಿಸಲು ಯೋಜಿಸಿದೆ. ಇದು ಅಸಾಂಪ್ರದಾಯಿಕ ಇಂಧನ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಇದರ ಮೂಲಕ ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ. ಈ ಎರಡನೇ ಹಂತಕ್ಕೆ ₹1036 ಕೋಟಿ ಖರ್ಚು ಮಾಡಲಾಗುವುದು’ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.