ಬೆಳಗಾವಿ: ‘ಹಿಂದೂ ಧರ್ಮ ಹಾಗೂ ಮಾತೃ ಭಾಷೆ ಶಾಶ್ವತವಾಗಿ ಇರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕನ್ನಡ ಮಾತೃ ಭಾಷೆ. ಅದು ತಾಯಿಗೆ ಸಮಾನವಾದುದು. ಸೂರ್ಯ–ಚಂದ್ರ ಇರುವವರೆಗೆ ಹಾಗೂ ಭೂಮಿ ಮೇಲೆ ಜನರು ವಾಸಿಸುವವರೆಗೂ ಕನ್ನಡ ಭಾಷೆ ಇರುತ್ತದೆ. ಪರಕೀಯರು ಆಳಿದಾಗಲೂ ಕನ್ನಡ ಭಾಷೆ ನಶಿಸಿ ಹೋಗಿಲ್ಲ. ಮುಂದೆಯೂ ತೊಂದರೆ ಆಗುವುದಿಲ್ಲ. ಭಾಷೆಯ ವಿಚಾರದಲ್ಲಿ ಯಾರೂ ಜಟಾಪಟಿ ನಡೆಸುವ ಅಗತ್ಯವಿಲ್ಲ’ ಎಂದರು.
‘ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಮುಖ್ಯಮಂತ್ರಿಗೆ ಇರುವ ಪರಮಾಧಿಕಾರ. ವರಿಷ್ಠರೊಂದಿಗೆ ಚರ್ಚಿಸಿ ಅವರು ತೀರ್ಮಾನ ಕೈಗೊಳ್ಳುತ್ತಾರೆ. ಐವರು ಉಪ ಮುಖ್ಯಮಂತ್ರಿಗಳನ್ನು ಮಾಡಲಾಗುತ್ತದೆ ಎನ್ನುವುದು ಗಾಳಿ ಸುದ್ದಿ. ಆ ರೀತಿಯ ಚರ್ಚೆಯೇ ನಡೆದಿಲ್ಲ’ ಎಂದರು.
ಕಾಂಗ್ರೆಸ್ನವರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ, ‘ಪಕ್ಷಕ್ಕೆ ಬರುವವರು– ಹೋಗುವವರು ಇದ್ದೇ ಇರುತ್ತಾರೆ’ ಎಂದು ಹೇಳಿದರು.
‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ ತನಿಖೆ ಹಂತದಲ್ಲಿದೆ. ಒಬ್ಬ ಮಂತ್ರಿಯಾಗಿ ತನಿಖೆಯಲ್ಲಿ ಮೂಗು ತೂರಿಸಲು ಬಯಸುವುದಿಲ್ಲ. ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.