ADVERTISEMENT

‘ಗಡಿ ವಿವಾದ ಇತ್ಯರ್ಥಕ್ಕಾಗಿ ಇನ್ನೆಷ್ಟು ದಿನ ಹೋರಾಡಬೇಕು?’

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 6:36 IST
Last Updated 17 ಜನವರಿ 2021, 6:36 IST
ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ (ಸಾಂದರ್ಭಿಕ ಚಿತ್ರ)
ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ (ಸಾಂದರ್ಭಿಕ ಚಿತ್ರ)   

ಬೆಳಗಾವಿ: ‘ಗಡಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಗಡಿಯಲ್ಲಿ ಮರಾಠಿ ಭಾಷಿಗರು ಇನ್ನೆಷ್ಟು ದಿನ ಹೋರಾಡಬೇಕು?’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಕಿರಣ ಠಾಕೂರ್ ಕೇಳಿದರು.

ಎಂಇಎಸ್‌ ವತಿಯಿಂದ ಇಲ್ಲಿನ ಹುತಾತ್ಮ ಚೌಕದಲ್ಲಿ ಭಾನುವಾರ ಸರಳವಾಗಿ ನಡೆದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಡಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕು. ಮಹಾರಾಷ್ಟ್ರ ಸರ್ಕಾರ ಕೂಡ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ನಾವು ನ್ಯಾಯ ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯನ್ನಲ್ಲ’ ಎಂದರು.

ADVERTISEMENT

ಎಂಇಎಸ್ ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗವಹಿಸುವ ಬಿಜೆಪಿ ಜನಸೇವಕ ಸಮಾವೇಶ ಸಮಾರೋಪಕ್ಕೆ ಅನುಮತಿ ನೀಡಿರುವ ಜಿಲ್ಲಾಡಳಿತ ಎಂಇಎಸ್‌ನ ರ‍್ಯಾಲಿಗೆ ಅನುಮತಿ ನಿರಾಕರಿಸಿದೆ. ಶಾ ಸಮಾವೇಶಕ್ಕೆ ಅಡ್ಡಿಯಾಗದ ಕೋವಿಡ್ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಮಹಾನಗರಪಾಲಿಕೆ ಮುಂಭಾಗ ಹಾರಿಸಿರುವ ಕನ್ನಡ ಧ್ವಜವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜ. 21ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಗುವುದು’ ಎಂದು ತಿಳಿಸಿದರು.

ಮುಖಂಡರು ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು. ಮುಖಂಡ ಪ್ರಕಾಶ ಶಿರೋಳಕರ ಇದ್ದರು. ಶಿವಸೇನೆಯಿಂದಲೂ ಗೌರವ ಸೂಚಿಸಲಾಯಿತು.

ಕೋವಿಡ್ ಕಾರಣದಿಂದ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ಕೊಟ್ಟಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.