ಬೆಳಗಾವಿ: ‘ನನ್ನ ಮೇಲೆ ಅಪವಾದ ಬರಲೆಂದು ಅನೇಕ ಶತ್ರುಗಳು ಷಡ್ಯಂತ್ರ ಹೆಣೆದಿದ್ದಾರೆ. ನನ್ನ ವಿರುದ್ಧ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನಾನಿದನ್ನು ಜಿದ್ದಿನಿಂದ ಸವಾಲಾಗಿ ಸ್ವೀಕರಿಸಿದ್ದೇನೆ. ಯಾವುದೇ ತನಿಖೆಗೆ ಸಿದ್ಧಳಿದ್ದೇನೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಒಬ್ಬ ಮಹಿಳೆ ಇಷ್ಟು ಉನ್ನತಮಟ್ಟಕ್ಕೆ ಬಂದು, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿರುವಾಗ ಸಹಿಸದೆ ಷಡ್ಯಂತ್ರ ಮಾಡಿದ್ದಾರೆ. ಮುಂದಕ್ಕೆ ಹೋಗಲು ಬಿಡಬಾರದು ಎಂಬ ದೃಷ್ಟಿಕೋನದಿಂದ ಶತ್ರುಗಳು ಮತ್ತು ಹಿತಶತ್ರುಗಳು ನನ್ನ ವಿರುದ್ಧ ತಂತ್ರ ರೂಪಿಸಿದ್ದಾರೆ’ ಎಂದರು.
‘ಆ ರೀತಿ ತಪ್ಪು ಮಾಡುವ ಅವಶ್ಯಕತೆ ಕೂಡ ನನಗೆ ಇಲ್ಲ. ತನಿಖೆಯಾಗಲಿ, ಏನು ವರದಿ ಬರುತ್ತೆದೆಯೋ ನೋಡೋಣ. ಎಲ್ಲದಕ್ಕೂ ನಾನು ಸಿದ್ಧಳಿದ್ದೇನೆ. ಅಧಿಕಾರ ಇಲ್ಲದೆಯೂ ಸಮಾಜಸೇವೆ ಮಾಡಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ನಿರ್ವಹಿಸಿದ್ದೇನೆ. ಹುರುಳಿಲ್ಲದ ಆರೋಪಗಳಿಗೆ ಕುಗ್ಗುವುದಿಲ್ಲ’ ಎಂದರು.
ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ‘ರಾಜಕೀಯದಲ್ಲಿ ಇರುವವರ ವಿರುದ್ಧ ಆರೋಪಗಳು ಸಾಮಾನ್ಯ. ಆರೋಪ ಬಂದಾಕ್ಷಣಕ್ಕೆ ಅಪರಾಧಿ ಎನ್ನಲಾಗದು. ಸಂಬಂಧಿಸಿದವರು ತನಿಖೆ ನಡೆಸಿದ ಬಳಿಕವಷ್ಟೆ ಎಲ್ಲವೂ ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.