ಬೆಳಗಾವಿ: ‘ಗೋಕಾಕದಲ್ಲಿರುವ ನಮ್ಮ ಮನೆಗೆ ಮಂಗಳವಾರ ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಸೇರುವಂತೆ ನನಗೆ ಆಹ್ವಾನ ನೀಡಿದ್ದಾರೆ. ಆದರೆ, ಆ ಬಗ್ಗೆ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ನಾನು ಇನ್ನೂ ಜೆಡಿಎಸ್ನಲ್ಲೇ ಇದ್ದೇನೆ’ ಎಂದು ಅಶೋಕ ಪೂಜಾರಿ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವೀರಶೈವ ಮುಖಂಡರನ್ನು ಪಕ್ಷಕ್ಕೆ ಆಹ್ವಾನ ಮಾಡುತ್ತಿದ್ದೇನೆ. ಗೋಕಾಕದಲ್ಲಿ ಬದಲಾವಣೆ ಮಾಡೋಣ ಎಂದು ನಿಮಗೂ ಆಹ್ವಾನ ಮಾಡಿದ್ದೇನೆ ಎಂದು ಸತೀಶ ತಿಳಿಸಿದರು. ಮುಖಂಡರು, ಹಿತೈಷಿಗಳು, ಬೆಂಬಲಿಗರು ಹಾಗೂ ನನ್ನನ್ನು ನಂಬಿದ ಕಾರ್ಯಕರ್ತರ ಅಭಿಪ್ರಾಯ ಆಲಿಸಿ ನಿರ್ಧಾರ ತಿಳಿಸುತ್ತೇನೆ ಎಂದು ಅವರಿಗೆ ಹೇಳಿದ್ದೇನೆ’ ಎಂದರು.
‘ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ. ಸತೀಶ ಅವರು ಯಾವುದೇ ಆಫರ್ ಅನ್ನೂ ನನಗೆ ಕೊಟ್ಟಿಲ್ಲ. ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಬಗ್ಗೆ ಚರ್ಚೆಯಾಗಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.