ADVERTISEMENT

ಅಂಗಡಿ ಕುಟುಂಬದವರಿಗೆ ರಮೇಶ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 9:43 IST
Last Updated 2 ಅಕ್ಟೋಬರ್ 2020, 9:43 IST

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ದಿ.ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ಸಾಂತ್ವನ ಹೇಳಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುರೇಶ ಅಂಗಡಿ, ಜಗದೀಶ ಶೆಟ್ಟರ್‌ ಹಾಗೂ ನಾನು ಒಂದು ಶಕ್ತಿಯಾಗಿದ್ದೆವು. ಅಂಗಡಿ ಅವರ ಪತ್ನಿ ಮಂಗಳಾ ಗೋಕಾಕದ ನಮ್ಮ ಮನೆಯಲ್ಲಿ ಬೆಳೆದವರು. ನನಗೆ ಸಹೋದರಿಗಿಂತಲೂ ಜಾಸ್ತಿ ಇದ್ದಾರೆ. ಅವರಿಗೆ ಧೈರ್ಯ ತುಂಬಿದ್ದೇನೆ. ಅವರಿಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲೂ ನೆರವಾಗುತ್ತೇನೆ’ ಎಂದು ತಿಳಿಸಿದರು.

‘ಅಂಗಡಿ ಅವರು ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದರು. ದೇವರು ಅವಕಾಶ ಕೊಡಲಿಲ್ಲ. ಅವರ ಅಗಲಿಕೆಯಿಂದ ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟ ಉಂಟಾಗಿದೆ. ಜಿಲ್ಲೆಯೂ ಬಡವಾಗಿದೆ. ಚುನಾವಣೆಯಲ್ಲಿ ಅಂಗಡಿ ವಿರುದ್ಧ ಕೆಲಸ ಮಾಡಲು ಕಾಂಗ್ರೆಸ್‌ನವರೂ ಮುಂದಾಗುತ್ತಿರಲಿಲ್ಲ. ಆ ರೀತಿಯ ಒಳ್ಳೆಯ ಒಡನಾಡವನ್ನು ಸುರೇಶ ಹೊಂದಿದ್ದರು’ ಎಂದರು.

ADVERTISEMENT

ಅಂಗಡಿ ಅವರನ್ನು ಮುಖ್ಯಮಂತ್ರಿ ಮಾಡಲು ಚರ್ಚೆ ನಡೆದಿತ್ತೆ ಎಂಬ ಪ್ರಶ್ನೆಗೆ, ‘ಆ ಬಗ್ಗೆ ಈಗ ಚರ್ಚೆ ಬೇಡ. ಮುಂದಿನ ದಿನಗಳಲ್ಲಿ ಹೇಳುತ್ತೇನೆ’ ಪ್ರತಿಕ್ರಿಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡ ಕಿರಣ್ ಜಾಧವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.