ಬೆಳಗಾವಿ: ‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿ, ಯುವ ಸಮುದಾಯವನ್ನು ಸಂಘಟಿಸಿ ಸಶಕ್ತ ಕನ್ನಡ ಸಾಹಿತ್ಯ ಪಡೆ ರೂಪಿಸುವ ಉದ್ದೇಶದಿಂದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಬಳ್ಳಾರಿಯ ರಾಜಶೇಖರ ಮುಲಾಲಿ ತಿಳಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಆಯ್ಕೆಯಾದರೆ ಪರಿಷತ್ತಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದರು.
‘ಗಡಿ ತಗಾದೆ, ಅಂತರರಾಜ್ಯ ನೆಲ, ಜಲ ವಿವಾದ, ಗಡಿ ಭಾಗದ ಕನ್ನಡ ಶಾಲೆಗಳ ದುಃಸ್ಥಿತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳುವಂತೆ ಸರ್ಕಾರವನ್ನು ಬಡಿದೆಚ್ಚರಿಸುವ ಕಾರ್ಯ ಕಸಾಪದಿಂದ ಆಗಬೇಕಾಗಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ಕಾರ್ಯವೂ ನಡೆಯಬೇಕಿದೆ. ಆದರೆ, ಕಸಾಪದ ಅಂಗಳದಲ್ಲಿ ಪ್ರಸ್ತುತ ಭ್ರಷ್ಟಾಚಾರ ಎಂಬುದು ಹೆಮ್ಮರವಾಗಿ ಬೆಳೆದಿದೆ’ ಎಂದು ಆರೋಪಿಸಿದರು.
‘ಪರಿಷತ್ತನ್ನು ಡಿಜಿಟಲೀಕರಣಗೊಳಿಸಿ ನಾಡಿನಲ್ಲೆಡೆ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ, ಗಡಿ ನಾಡಿನ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದ ಮೀಸಲು ಜಾರಿಗೆ ಹೋರಾಟ ರೂಪಿಸಲಾಗುವುದು. ಕಸಾಪ ರಾಜ್ಯ ಮಹಿಳಾ ಘಟಕ ಪ್ರಾರಂಭಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾಧಕಿಯರನ್ನು ಗುರುತಿಸಿ, ಗೌರವಿಸಲಾಗುವುದು. ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತದಾದ ‘ಕನ್ನಡ ಭವನ’ ನಿರ್ಮಿಸುವ ಪರಿಕಲ್ಪನೆ ಇದೆ’ ಎಂದು ತಿಳಿಸಿದರು.
‘ಪರಿಷತ್ತಿನ ಸರ್ವಾಂಗೀಣ ಅಭಿವೃದ್ಧಿಗಾಗಿ ವಲಯವಾರು ಗೌರವ ಕಾರ್ಯದರ್ಶಿಗಳನ್ನು ನೇಮಿಸಲಾಗುವುದು. ಕನ್ನಡ ಸಾಹಿತ್ಯ ಪುಸ್ತಕಗಳ ಮುದ್ರಣಕ್ಕೆ ಉತ್ತೇಜನ ನೀಡಲಾಗುವುದು. ಹೀಗಾಗಿ, ಸದಸ್ಯರು ಬೆಂಬಲಿಸಬೇಕು’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.