ADVERTISEMENT

ಬೈಲಹೊಂಗಲ: ಅಪಘಾತದಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

ಹೊಸೂರು ಗ್ರಾಮದಲ್ಲಿ ಕಳೇಬರ ಮೆರವಣಿಗೆ, ಅಪಾರ ಸಂಖ್ಯೆಯಲ್ಲಿ ಸೇರಿದ ಜನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 10:44 IST
Last Updated 3 ಜೂನ್ 2022, 10:44 IST
ಬೈಲಹೊಂಗಲ ಸಮೀಪದ ಹೊಸೂರು ಗ್ರಾಮದಲ್ಲಿ ಶುಕ್ರವಾರ, ಯೋಧ ಪ್ರಕಾಶ ಸಂಗೊಳ್ಳಿ ಅವರ ಕಳೇಬರಕ್ಕೆ ಸೇನಾಧಿಕಾರಿ ನಮನ ಸಲ್ಲಿಸಿದರು
ಬೈಲಹೊಂಗಲ ಸಮೀಪದ ಹೊಸೂರು ಗ್ರಾಮದಲ್ಲಿ ಶುಕ್ರವಾರ, ಯೋಧ ಪ್ರಕಾಶ ಸಂಗೊಳ್ಳಿ ಅವರ ಕಳೇಬರಕ್ಕೆ ಸೇನಾಧಿಕಾರಿ ನಮನ ಸಲ್ಲಿಸಿದರು   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ, ಸಮೀಪದ ಹೊಸೂರು ಗ್ರಾಮದ ಯೋಧ ಪ್ರಕಾಶ‌ ಮಡಿವಾಳಪ್ಪ ಸಂಗೊಳ್ಳಿ (28) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.

ಬೆಳಗಾವಿಯ ಸುವರ್ಣ ವಿಧಾನಸೌಧದ ಹತ್ತಿರ, ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದ‍ ಪರಿಣಾಮ, ಅವರು ಕೊನೆಯುಸಿರೆಳೆದರು. 2013ರಿಂದ ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ ಸೇವೆಯಲ್ಲಿದ್ದ ಅವರು, ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆಂದು ರಜೆ ಪಡೆದಿದ್ದರು. ಬೈಕ್‌ ಮೇಲೆ ಹೊರಟಾಗ ಅವಘಡ ಸಂಭವಿಸಿದೆ.

ಶುಕ್ರವಾರ ನಸುಕಿನ ಹೊತ್ತಿಗೆ ಯೋಧನ ಪ್ರಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದಾಗ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟೊತ್ತಿಗೆ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತಲಿನ ಹಳ್ಳಿಗಳಿಗೂ ಹರಡಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಯೋಧನ ಸಾವಿಗೆ ಕಂಬನಿ ಮಿಡಿದರು.

ADVERTISEMENT

ಪ್ರಕಾಶ ಅವರ ಅಭಿಮಾನಿಗಳು, ಸ್ನೇಹಿತರು, ಸಹಪಾಠಿಗಳು ಸೇರಿಕೊಂಡು ತೆರೆದ ವಾಹನದಲ್ಲಿ ಕಳೇಬರದ ಮೆರವಣಿಗೆ ಮಾಡಿದರು. ಪುಷ್ಪಾಲಂಕೃತ ವಾಹನವು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮನೆಗಳ ಮುಂದೆ ಬಂದಾಗ ಹಲವರು ವಾಹನ ಹತ್ತಿ ಯೋಧನ ಅಂತಿಮ ದರ್ಶನ ಪಡೆದರು. ದಾರಿಯುದ್ದಕ್ಕೂ ದೇಶಭಕ್ತಿ ಗೀತೆಗಳು ಮೊಳಗಿದವು. ಭಾರತ್‌ ಮಾತಾ ಕಿ ಜೈ, ಫೌಜಿ ಪ್ರಕಾಶ್‌ ಅಮರ್‌ ರಹೇ... ಎಂದು ಯುವಕರು ಘೋಷಣೆ ಹಾಕಿದರು.

ಬೈಲಹೊಂಗಲ ಸಮೀಪದ ಹೊಸೂರು ಗ್ರಾಮದಲ್ಲಿ ಶುಕ್ರವಾರ ನಡೆದ ಯೋಧ ಪ್ರಕಾಶ ಸಂಗೊಳ್ಳಿ ಅವರ ಅಂತಿಮ ಯಾತ್ರೆಯಲ್ಲಿ ಅಪಾರ ಜನ ಪಾಲ್ಗೊಂಡರು

ಸೇನಾ ನಿಯಮದಂತೆ ಅಂತ್ಯಕ್ರಿಯೆ: ಮರಾಠಾ ಲಘು ಪದಾತಿ ದಳದ ಸುಬೇದಾರ್‌ಗಳಾದ ಲಕ್ಷ್ಮಣ ಪೂಜಾರ, ಎಂ.ಎಸ್.ಕೆ. ಹುಬ್ಬಳ್ಳಿ, ದಯಾನಂದ ಭೂವಾ ಅವರ ನೇತೃತ್ವದಲ್ಲಿ, ಅಂತ್ಯಕ್ರಿಯೆ ವೇಳೆ ಸೇನಾ ನಿಯಮಗಳನ್ನು ಅನುಸರಿಸಲಾಯಿತು.

ಯೋಧರ ತಂಡವು ಪ್ರಕಾಶ ಅವರ ದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜ ಹಾಗೂ ಅವರ ಸೇನಾ ಸಮವಸ್ತ್ರಗಳನ್ನು ತಾಯಿ ಕಸ್ತೂರೆವ್ವ ಹಾಗೂ ಪತ್ನಿ ಚನ್ನಮ್ಮ ಅವರ ಕೈಗೆ ಹಸ್ತಾಂತರಿಸಿದರು.‌

ತಹಶೀಲ್ದಾರ್‌ ಪಾಟೀಲ, ಹೊಸೂರು ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು, ಅಧಿಕಾರಿಗಳು, ಎನ್‌ಸಿ‌ಸಿ ಕೆಡೆಟ್‌ಗಳು ಶಿಸ್ತಿನಿಂದ ಪಾಲ್ಗೊಂಡರು.

ಸೀಮಂತದ ಮನೆಯಲ್ಲಿ ಮಡುಗಟ್ಟಿದ ಶೋಕ

ಪ್ರಕಾಶ ಅವರ ಪತ್ನಿ ಚನ್ನಮ್ಮ ತುಂಬು ಗರ್ಭಿಣಿ. ಅವರ ಸೀಮಂತ ಕಾರ್ಯಕ್ರಮವನ್ನು ಸಂಭ್ರಮದಿಂದ ಮಾಡಲು ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ತಂದೆಯಾಗುವ ಉಲ್ಲಾಸದಲ್ಲಿದ್ದ ಯೋಧ, ಶವವಾಗಿದ್ದನ್ನು ಕಂಡು ಕುಟುಂಬ ದಿಗ್ಭ್ರಮೆಗೊಂಡಿದೆ.

ಪತ್ನಿ, ತಾಯಿ ಹಾಗೂ ಸಹೋದರಿಯ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದ ಹೆಣ್ಣುಮಕ್ಕಳು ಅವರನ್ನು ಸಂಬಾಳಿಸಲು ಪರದಾಡಬೇಕಾಯಿತು.

ಪ್ರಕಾಶ ಅವರ ತಂದೆ ಮಡಿವಾಳಪ್ಪ ಕೂಡ ಕೆಲವೇ ದಿನಗಳ ಹಿಂದೆ ತೀರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.