ADVERTISEMENT

ಬೆಳಗಾವಿ: ಇಂಡೋ–ಅಫ್ರಿಕನ್‌ ಸಮ್ಮೇಳನ ಜ.24ರಿಂದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 8:45 IST
Last Updated 22 ಜನವರಿ 2022, 8:45 IST

ಬೆಳಗಾವಿ: ಇಲ್ಲಿನ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಸಂಸ್ಥೆ (ಜಿಐಟಿ) ಎಂಬಿಎ ವಿಭಾಗವು ಇಥಿಯೋಪಿಯಾದ ವೊಲ್ಕೈಟ್ ವಿಶ್ವವಿದ್ಯಾಲಯ, ಭಾರತೀಯ ಇಥಿಯೋಪಿಯಾ ಆಫ್ರಿಕನ್‌ ಅಧ್ಯಯನ ಸಂಘ ಮತ್ತು ನವದೆಹಲಿಯ ಜೆಎನ್‌ಯು ಆಫ್ರಿಕನ್‌ ಅಧ್ಯಯನಗಳ ಕೇಂದ್ರದ ಸಹಯೋಗದಲ್ಲಿ ಜ. 24 ಮತ್ತು 25ರಂದು ‘ಇಂಡೋ– ಆಫ್ರಿಕನ್ ವ್ಯವಹಾರಗಳು-ಕಾರ್ಯತಂತ್ರದ ದೃಷ್ಟಿಕೋನ’ ವಿಷಯ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ (ವರ್ಚುವಲ್) ಆಯೋಜಿಸಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಇಥಿಯೋಪಿಯಾ ವೋಲ್ಕೈಟ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಫಾರಿಸ್ ಡೆಲಿಲ್ ಯೇಸುಫ್ ಭಾಗವಹಿಸುವರು. ಕೆಎಲ್‌ಎಸ್‌ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪ್ರಮೋದ್ ಕಠವಿ ಅಧ್ಯಕ್ಷತೆ ವಹಿಸುವರು. ಜೆಎನ್‌ಯು ಆಫ್ರಿಕನ್‌ ಅಧ್ಯಯನಗಳ ಕೇಂದ್ರದ ಅಧ್ಯಕ್ಷ ಡಾ.ಅಜಯ್ ಕುಮಾರ್ ದುಬೆ, ಸಿಕೇರ್ ಸಿ.ಜಿ.ಕೆ. ಕನ್ಸಸ್ಟ್ರಕ್ಸನ್ಸ್‌ ಮತ್ತು ರಿಯಲ್ ಎಸ್ಟೇಟ್ಸ್ ಪ್ರೈ.ಲಿ. ಸಂಸ್ಥಾಪಕ ಚೈತನ್ಯ ಕುಲಕರ್ಣಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ.

‘ಉದ್ಯಮಿಗಳು ತಮ್ಮ ವ್ಯಾಪಾರ ವ್ಯಾಪ್ತಿಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜ್ಞಾನ ಹಂಚಿಕೆಗೆ ಮತ್ತು ಭವಿಷ್ಯದಲ್ಲಿ ಸಹಕಾರಕ್ಕಾಗಿ ಪರಸ್ಪರ ಪ್ರಯೋಜನಕಾರಿ ಸಂಬಂಧಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಜಿಐಟಿ ಪ್ರಾಂಶುಪಾಲ ಡಾ.ಜಯಂತ್ ಕೆ.ಕಿತ್ತೂರು ತಿಳಿಸಿದ್ದಾರೆ.

ADVERTISEMENT

‘ತಂತ್ರಜ್ಞಾನ–ಆರ್ಥಿಕ ಸಾಮರ್ಥ್ಯ ನಿರ್ಮಾಣ, ಕೌಶಲ ಅಭಿವೃದ್ಧಿ, ರಫ್ತು ಮತ್ತು ಆಮದುಗೆ ಸಂಬಂಧಿಸಿದಂತೆ ವ್ಯಾಪಾರ ಸಂಬಂಧಗಳು ಮತ್ತು ಇತರ ಹಲವು ಅಂಶಗಳ ಕುರಿತು ಭಾರತ-ಆಫ್ರಿಕಾ ಸಹಕಾರವನ್ನು ಚರ್ಚಿಸುವ ಉದ್ದೇಶವನ್ನು ಸಮ್ಮೇಳನದ ಮೂಲಕ ಹೊಂದಲಾಗಿದೆ’ ಎಂದು ಎಂಬಿಎ ವಿಭಾಗದ ಡೀನ್ ಡಾ. ಕೃಷ್ಣಶೇಖರ್ ಲಾಲ್ ದಾಸ್ ಹೇಳಿದ್ದಾರೆ.

200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿವಿಧ 7 ದೇಶಗಳಿಂದ 30ಕ್ಕೂ ಹೆಚ್ಚು ಪ್ರಬಂಧಗಳು ಮಂಡನೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.