ಬೆಳಗಾವಿ: ಕೃಷಿ ವಿಶ್ವವಿದ್ಯಾಲಯ ತಜ್ಞರ ತಂಡದವರು ಈಚೆಗೆ ತಾಲ್ಲೂಕಿನ ವಿವಿಧ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣ ಮಾರ್ಗದರ್ಶನದಂತೆ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಗುರುಪ್ರಸಾದ ಬಲ್ಲಾಳ ಬೆಳೆಗಳ ರೋಗದ ಬಗ್ಗೆ ಹಾಗೂ ಎಸ್.ಎನ್. ಜಾಧವ ಕೀಟಗಳ ಬಗ್ಗೆ ಮಾಹಿತಿ ಪಡೆದರು.
ಹೊಸವಂಟಮುರಿ, ಭೂತರಾಮನಹಟ್ಟಿ ಭಾಗದಲ್ಲಿ ಹತ್ತಿ ಬೆಳೆಯ ರಸ ಹೀರುವ ಕೀಟ, ದೇವಗಿರಿ ಭಾಗದಲ್ಲಿ ಗೋವಿನ ಜೋಳ, ಭತ್ತ ಬೆಳೆಗೆ ಲದ್ದಿ ಹುಳ ಕಾಣಿಸಿಕೊಂಡಿರುವುದು, ಸೋಯಾಬಿನ್ನಲ್ಲಿ ಸ್ಪೊಡೊಫಿರಾ ಕೀಟ, ಕೆ.ಕೆ. ಕೊಪ್ಪ ಭಾಗದಲ್ಲಿ ತರಕಾರಿ ಬೆಳೆಗೆ ಬಸವನಹುಳ ಕಾಟ ಕಂಡುಬಂದಿರುವ ಬಗ್ಗೆ ಸಮೀಕ್ಷೆ ನಡೆಸಿ, ಹತೋಟಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ ನೀಡಿದರು.
‘ರೈತ ಸಂಪರ್ಕ ಕೇಂದ್ರದಲ್ಲಿ ಅವಶ್ಯ ಕೀಟನಾಶಕಗಳು ರಿಯಾಯಿತಿ ದರದಲ್ಲಿ ಲಭ್ಯ ಇವೆ. ಇವುಗಳನ್ನು ಬಳಸಿ ರೋಗಗಳ ಹತೋಟಿಗೆ ರೈತರು ಮುಂದಾಗಬೇಕು’ ಎಂದು ಜಿ.ಬಿ. ಕಲ್ಯಾಣಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.