ADVERTISEMENT

ಬೆಂಗಳೂರು‍– ಬೆಳಗಾವಿ– ಮುಂಬೈ ಹೈಸ್ಪೀಡ್‌ ರೈಲು ಮಂಜೂರಾತಿಗೆ ಶೆಟ್ಟರ್‌ ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 3:09 IST
Last Updated 13 ಫೆಬ್ರುವರಿ 2026, 3:09 IST
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಬುಧವಾರ ಭೇಟಿ ಮಾಡಿದರು
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ್‌ ಬುಧವಾರ ಭೇಟಿ ಮಾಡಿದರು   

ಬೆಳಗಾವಿ: ಬೆಂಗಳೂರು– ಬೆಳಗಾವಿ– ಮುಂಬೈ ನಡುವಿನ ಹೈಸ್ಪೀಡ್‌ ರೈಲು ಕಾರಿಡಾರ್ ಯೋಜನೆಯನ್ನು ಸಹ ಪ್ರಸಕ್ತ ಬಜೆಟ್‌ನಲ್ಲಿಯೇ ಪರಿಗಣಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್‌ ಅವರು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ಶೆಟ್ಟರ್‌, ‘ಈಚೆಗೆ ಮಂಡಿಸಲಾದ ಕೇಂದ್ರ ಬಜೆಟ್: 2026-27ರಲ್ಲಿ ದೇಶದ ಹೈಸ್ಪೀಡ್‌ ರೈಲು ಕಾರಿಡಾರ್ ಯೋಜನೆಯಡಿ ಏಳು ನಗರಗಳಿಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಬೆಳಗಾವಿ ಮಾರ್ಗವಾಗಿ ಬೆಂಗಳೂರು– ಮುಂಬೈ ನಡುವಿನ ಮಾರ್ಗ ಘೋಷಣೆ ಮಾಡಬೇಕು. ಇದರಿಂದ ಈ ಮಾರ್ಗದಲ್ಲಿ ಬರುವಂತಹ ಸಣ್ಣ ಮತ್ತು ಮಧ್ಯಮ ನಗರಗಳೂ ಸಹ ಅಭಿವೃದ್ಧಿ ಹೊಂದಲೊಂದು ಅವಕಾಶ ಕಲ್ಪಿಸಿದಂತಾಗುವುದು’ ಎಂದರು ವಿವರಿಸಿದರು.

‘ಬೆಳಗಾವಿ ಜಿಲ್ಲೆಯ ಪರಕನಟ್ಟಿ, ಗೋಕಾಕ ನಗರ ಮತ್ತು ಯಾದವಾಡ ಮಾರ್ಗವಾಗಿ ಬಾಗಲಕೋಟೆ ನಗರಕ್ಕೆ ಹೊಂದಿಕೊಂಡು ಸಹ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ವಿಷಯ ಪರಿಗಣಿಸಬೇಕು. ಪ್ರಸ್ತಾಪಿತ ಮಾರ್ಗದಲ್ಲಿ ಈಗಾಗಲೇ ಹಲವಾರು ಸಿಮೆಂಟ್ ಮತ್ತು ಸಕ್ಕರೆ ಕಾರ್ಖಾನೆಗಳು ಇದ್ದು, ಈ ಮಾರ್ಗ ನಿರ್ಮಾಣವಾದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ತುಂಬಾ ಸಹಕಾರಿಯಾಗಲಿದೆ’ ಎಂದು ಸಂಸದರು ಸಚಿವರಲ್ಲಿ ತಿಳಿಸಿದರು.

ADVERTISEMENT

‘ಬೆಳಗಾವಿಯಿಂದ ಈಗ ಚಾಲನೆಯಲ್ಲಿರುವ ಬೆಳಗಾವಿ– ಬೆಂಗಳೂರು ‘ವಂದೇ ಭಾರತ್‌’ ಎಕ್ಸಪ್ರೆಸ್ ರೈಲು ಬೆಳಗಾವಿಯಿಂದ ಬೆಳ್ಳಿಗ್ಗೆ 5:35ಕ್ಕೆ ಹೊರಡುತ್ತದೆ. ಈ ಸಂಚಾರ ಸಮಯವನ್ನು 6:15 ಕ್ಕೆ ಬದಲಾವಣೆ ಮಾಡಿದ್ದಲ್ಲಿ, ಇನ್ನು ಹೆಚ್ಚು ಪ್ರಯಾಣಿಕರಿಗೆ ಸಂಚರಿಸಲು ಅನುಕೂಲವಾಗುವುದು’ ಎಂದು ಸಂಸದರು ಪ್ರಸ್ತಾಪಿಸಿದರು. 

ಮನವಿಗೆ ಅನುಗುಣವಾಗಿ ಶೀಘ್ರದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆಯನ್ನು ಕೇಂದ್ರ ರೈಲ್ವೆ ಸಚಿವರು ನೀಡಿರುವುದಾಗಿ ಸಂಸದ ಶೆಟ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ, ರೈಲ್ವೆ ಬೋರ್ಡ್‌ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕರಿ ಸತೀಶಕುಮಾರ ಅವರನ್ನು ಸಹ ಅವರ ನವ ದೆಹಲಿಯ ರೈಲು ಭವನದ ಕಚೇರಿಯಲ್ಲಿ ಭೇಟಿ ಮಾಡಿದರು. ಲೋಕಾಪುರ– ರಾಮದುರ್ಗ– ಸವದತ್ತಿ– ಧಾರವಾಡ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವೆನಿಸಿದ ಪೂರ್ವ ಸಮೀಕ್ಷಾ ಕಾರ್ಯ ಕೈಗೊಳ್ಳಲು ಮತ್ತು ಈ ಕುರಿತಾದ ಅವರಲ್ಲಿ ಬಂದಿರುವ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ’ ಸಂಸದರು ಕೋರಿದರು.

ಬೆಳಗಾವಿ– ಮಣಗೂರ ನಡುವೆ ಈ ಮೊದಲು ಸಂಚರಿಸುತ್ತಿದ್ದ ರೈಲು ರದ್ದುಗೊಂಡಿದ್ದು, ಅದನ್ನು ಪುನಾರಂಭಿಸಿ ಬೆಳಗಾವಿ ನಿವಾಸಿಗಳಿಗೆ ಅನುಕೂಲತೆ ಮಾಡಿಕೊಡುವಂತೆ ಕೋರಲಾಯಿತು.

ಈ ಬೇಡಿಕೆಗಳ ಬಗ್ಗೆ ಆದಷ್ಟು ಬೇಗನೆ ಕ್ರಮ ಕೈಕೋಳ್ಳುವುದಾಗಿ ರೈಲ್ವೆ ಬೋರ್ಡ್‌ ಅಧ್ಯಕ್ಷ ತಿಳಿಸಿರುವುದಾಗಿ ಶೆಟ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.