ಬೆಳಗಾವಿ: ರಾಜ್ಯದಲ್ಲಿರುವುದು ತಿನ್ನಪ್ಪ, ನುಂಗಪ್ಪಗಳ ಸರ್ಕಾರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಇಲ್ಲಿನ ಕಾಂಗ್ರೆಸ್ ಭವನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಾಸಕರನ್ನು ಖರೀದಿಸಿ, ರಾಜ್ಯ ಲೂಟಿ ಹೊಡೆಯಲು ಯಡಿಯೂರಪ್ಪ ಬಂದಿದ್ದಾರೆ. ಅವರಷ್ಟು ಭ್ರಷ್ಟರು ಯಾರೂ ಇಲ್ಲ. ಇಷ್ಟು ಕೆಟ್ಟ, ಭ್ರಷ್ಟ ಹಾಗೂ ಸ್ವಜನ ಪಕ್ಷಪಾತ ಮಾಡುವ ಸರ್ಕಾರ ಎಂದಿಗೂ ಬಂದಿರಲಿಲ್ಲ. ಜನರ ತೆರಿಗೆ ದುಡ್ಡು ಲೂಟಿ ಮಾಡುತ್ತಿದ್ದರೂ ಸುಮ್ಮನೆ ಕೂರಬೇಕೇ? ಸಾಲ ತಂದು ಸಂಬಳ ಕೊಡುವಂತಹ ಸ್ಥಿತಿ ಇದೆ. ಈ ರಾಜ್ಯ ಉಳಿಯುತ್ತದೆಯೇ? ಕತ್ತಲಿಗೆ ಹೋಗಲಿದೆ. ನಾವೇ ಅಧಿಕಾರಕ್ಕೆ ಬಂದರೂ ಸರಿಪಡಿಸಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ’ ಎಂದರು.
‘₹90 ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ ಯಡಿಯೂರಪ್ಪ. ಇದಕ್ಕಾ ಯಡಿಯೂರಪ್ಪ ಅವರನ್ನು ರಾಜಾಹುಲಿ ಬೇಕು ಎಂದದ್ದು? ಸರ್ಕಾರದ ವೈಫಲ್ಯಗಳನ್ನು ನಾವುಮನೆ ಮನೆಗಳಿಗೆ ತಲುಪಿಸಬೇಕು’ ಎಂದು ಅವರು ಹೇಳಿದರು.
‘ಕೊರೊನಾ ದೊಡ್ಡ ರೋಗ. ಅದರೊಂದಿಗೆ ನಾವು ಬದುಕಬೇಕು. ನನ್ನ ಪ್ರಕಾರ ಲಸಿಕೆ ಬರಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಹೀಗಾಗಿ ಮಾಸ್ಕ್ ಧರಿಸುವುದು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಬೆಳಗಾವಿ ದೊಡ್ಡ ಜಿಲ್ಲೆ. 2-3 ಜಿಲ್ಲೆ ಮಾಡಬಹುದಾದಷ್ಟು ದೊಡ್ಡದು. ಆದರೆ, ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕಾಟದಿಂದಾಗಿ ನಾವು ವಿಭಜನೆಗೆ ಮುಂದಾಗಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ:ಬೆಳಗಾವಿ: ಕಾಂಗ್ರೆಸ್ ಭವನ ಉದ್ಘಾಟನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.