ADVERTISEMENT

ಬೆದರಿಕೆಯಿಂದ ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿದೆ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 12:41 IST
Last Updated 23 ಸೆಪ್ಟೆಂಬರ್ 2021, 12:41 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜದವರನ್ನು ಮುಖ್ಯಮಂತ್ರಿ ಮಾಡಿದರೆ ಧರ್ಮಸ್ಥಳಕ್ಕೆ ಹೋಗುವುದಾಗಿ ಒತ್ತಡ ಹಾಕಿದ್ದರು. ಅದಕ್ಕೆ ಬಿಜೆಪಿ ಹೈಕಮಾಂಡ್ ಮಣಿದಿದ್ದರಿಂದಾಗಿ ಪಂಚಮಸಾಲಿಗಳಿಗೆ ಸ್ಥಾನ ತಪ್ಪಿರಬಹುದು’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವೇಳೆ ನಮ್ಮ ಸಮಾಜದ ಬಸನಗೌಡ ಪಾಟೀಲ ಯತ್ನಾಳ್ ಅಥವಾ ಅರವಿಂದ ಬೆಲ್ಲದ ಅವರನ್ನು ಪರಿಗಣಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬದಲಾಯಿತು’ ಎಂದು ತಿಳಿಸಿದರು.

‘ಒತ್ತಡ ಹಾಕಿದವರು ಯಾರು’ ಎಂಬ ಪ್ರಶ್ನೆಗೆ, ‘ಗೊತ್ತಿಲ್ಲ. ಆ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೆ. ಹಾಗೆಯೇ ಆಗಿರಬಹುದೆಂದು ನನಗೂ ಅನಿಸಿದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ADVERTISEMENT

‘ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದಿದ್ದ ವೇಳೆವರೆಗೂ, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಬಳಿಕ ಬದಲಾಯಿತು’ ಎಂದರು.

‘ನಾಯಕತ್ವ ಬದಲಾವಣೆಯಾದರೆ ಉತ್ತರ ಕರ್ನಾಟಕ ಲಿಂಗಾಯತ ಶಾಸಕರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದ್ದೆವು. ನಮ್ಮ ಬಯಕೆಯಂತೆ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ಸಿಕ್ಕಿದೆ. ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ಬೆಂಬಲಿಸಿದ ವ್ಯಕ್ತಿ ಮುಖ್ಯಮಂತ್ರಿ ಆದದ್ದು ಸಮಾಧಾನ ಹಾಗೂ ಸಂತಸ ತಂದಿದೆ. ಖಂಡಿತವಾಗಿಯೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

‘ನಾನು ಮೀಸಲಾತಿಗಾಗಿ ಒತ್ತಾಯಿಸಿ ಪ್ರಾಮಾಣಿಕವಾಗಿ ಪಾದಯಾತ್ರೆ ಮಾಡಿದ್ದೆ. ಹೋರಾಟದ ವೇಳೆ ಹತ್ತು ಲಕ್ಷ ಜನ ಸೇರಿದ್ದರು. ಹೋರಾಟದಲ್ಲಿ ಯಾವ ಸಮುದಾಯದವರೂ ಇಷ್ಟೊಂದು ಪ್ರಮಾಣದಲ್ಲಿ ಸೇರಿದ್ದ ಇತಿಹಾಸ ಇರಲಿಲ್ಲ. ಲಿಂಗಾಯತರಲ್ಲಿ ಬಹುಸಂಖ್ಯಾತರೆಂದರೆ ಪಂಚಮಸಾಲಿಗಳು ಎನ್ನುವ ಸತ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮ್ಮ ಹೋರಾಟದಿಂದ ಗೊತ್ತಾಗಿದೆ’ ಎಂದರು.

‘ಸರ್ಕಾರ ನೀಡಿದ್ದ ಭರವಸೆ ಈಡೇರಿಲ್ಲ. ಗಡುವು (ಸೆ.15) ಮೀರಿದ್ದರಿಂದಾಗಿ ರಾಜ್ಯದಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ನಡೆಸುತ್ತಿದ್ದೇವೆ. ಅದು ಅ.1ರಂದು ಬೆಂಗಳೂರು ತಲುಪಲಿದೆ. ಅಷ್ಟರೊಳಗೆ ಬೇಡಿಕೆ ಈಡೇರಿಸಿದರೆ ಮುಖ್ಯಮಂತ್ರಿಗೆ ಕಲ್ಲುಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ. ಈಗ ನಡೆದಿರುವ ವಿಧಾನಮಂಡಲ ಅಧಿವೇಶನದಲ್ಲೇ ಮುಖ್ಯಮಂತ್ರಿ ಘೋಷಿಸಬೇಕು. ಇಲ್ಲದಿದ್ದರೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ 5ನೇ (ಪಂಚಮ) ಹಂತದ ಚಳವಳಿ ಆರಂಭಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.