ಹುಕ್ಕೇರಿ: ರಾಜಾ ಲಖಮಗೌಡ ಜಲಾಶಯ (ಹಿಡಕಲ್ ಡ್ಯಾಂ) ಭರ್ತಿಯಾದ ಹಿನ್ನೆಲೆಯಲ್ಲಿ ಎಲ್ಲ ಹತ್ತು ಕ್ರೆಸ್ಟ್ ಗೇಟ್ ತೆರೆದು 20 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಗುರುವಾರ ಬಿಡಲಾಯಿತು. ಬುಧವಾರ 10 ಸಾವಿರ ಕ್ಯುಸೆಕ್ ಬಿಡಲಾಗಿತ್ತು. ಒಂದೇ ದಿನ ಜಲಾಶಯಕ್ಕೆ 3 ಅಡಿ ನೀರು ಸೇರಿಕೊಂಡಿದೆ.
ಈಗ ಜಲಾಶಯವು ಬಹುತೇಕ ಭರ್ತಿಯಾಗಿದೆ. ಗುರುವಾರ ಜಲಾಶಯದ ನೀರಿನ ಮಟ್ಟ 2168.283 ಅಡಿ ಇದ್ದು, (ಗರಿಷ್ಠ 2175 ಅಡಿ). ಒಳಹರಿವು 39,174 ಕ್ಯುಸೆಕ್ ಇದೆ. 20 ಸಾವಿರ ಕ್ಯುಸೆಕ್ ಗೇಟ್ ಮೂಲಕ ನದಿಗೆ, 1500 ಕೆಪಿಸಿಎಲ್ (ವಿದ್ಯುತ್ ಉತ್ಪಾದನೆಗೆ) ಮತ್ತು ಘಟಪ್ರಭಾ ಎಡದಂಡೆ ಹಾಗೂ ಚಿಕ್ಕೋಡಿ ಶಾಖಾ ಕಾಲುವೆ ಸೇರಿ ಒಟ್ಟು 25,000 ಕ್ಯುಸೆಕ್ ಹೊರ ಹರಿವು ಇದೆ.
‘ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ನೀರಿನ ಒಳ ಹರಿವು ಹೆಚ್ಚಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕ್ರೆಸ್ಟ್ ಗೇಟ್ ಮೂಲಕ ನದಿಗೆ ಹರಿಸಲಾಗುವುದು’ ಎಂದು ಎಇಇ ಜಗದೀಶ್ ಮತ್ತು ಸೆಕ್ಷನ್ ಆಫೀಸರ್ ಎಸ್.ಆರ್.ಕಾಮತ್ ತಿಳಿಸಿದರು.
ನದಿ ತಟದ ಜನರು ನೀರಿನ ಹರಿವು ಹೆಚ್ಚಾಗುವ ಮೊದಲೇ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಎಂಜನಿಯರುಗಳು ವಿನಂತಿಸಿದ್ದಾರೆ.
ನೀರು ಬಿಡುವ ಮೊದಲು ತಹಶೀಲ್ದಾರ್ ಮಂಜುಳಾ ನಾಯಕ್ ಮತ್ತು ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಅಶೋಕ್ ಖಂಡರಟ್ಟಿ, ಕರ್ನಾಟಕ ನೀರಾವರಿ ನಿಗಮದ ಎಇಇಗಳಾದ ಜಗದೀಶ್ ಬಿ.ಕೆ., ಅರವಿಂದ ಜಮಖಂಡಿ, ರಾಜಶೇಖರ್ ಪಾಟೀಲ್, ಶುಶಾಂತ ಕುಡಬಾಳೆ, ಯಮಕನಮರಡಿ ಪಿಐ ರಮೇಶ್ ಛಾಯಾಗೋಳ, ಅಂಕಲಗುಡಿಕೇತ್ರ ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ಹೆಬ್ಬಾಳ, ಗುತ್ತಿಗೆದಾರ ದ್ಯಾಮಣ್ಣ ಭೋವಿವಡ್ಡರ್, ಸತ್ಯಪ್ಪ ಸಣ್ಣಮನಿ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.