
ರಾಮದುರ್ಗ: ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮಗಳನ್ನು ಕಾಯಕ ಗ್ರಾಮ ಯೋಜನೆಯಡಿ ಆಯ್ಕೆಗೊಂಡಿರುವ ತಾಲ್ಲೂಕಿನ ಬನ್ನೂರ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಮೇತ ಭೇಟಿ ನೀಡಿ ಮಾದರಿ ಗ್ರಾಮ ಮಾಡಲು ಕೈಗೊಳ್ಳಬೇಕಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರು ಜಿಲ್ಲೆಯಲ್ಲಿಯೇ ಎರಡನೇ ಗ್ರಾಮ ಎಂದು ಆಯ್ಕೆ ಮಾಡಿರುವ ಬನ್ನೂರು ಪಂಚಾಯಿತಿಯಲ್ಲಿ ನಿಯಮಿತ ಗ್ರಾಮ ಸಭೆಗಳನ್ನು ನಡೆಸುವುದು, ಮೂಲ ಸೌಲಭ್ಯ ಅಭಿವೃದ್ಧಿ, ಅರಿವು ಕೇಂದ್ರ, ಕೂಸಿನ ಮನೆ, ಶಿಕ್ಷಣ, ಆರೋಗ್ಯ, ತೆರಿಗೆ ಸಂಗ್ರಹಣೆ, ಸೇವಾ ವಿತರಣೆ, ನರೇಗಾ ಯೋಜನೆಯ ಸಮರ್ಪಕ ಬಳಕೆ, ಶಾಲೆಗಳಲ್ಲಿ ಮಕ್ಕಳ ಕೈತೋಟ ನಿರ್ಮಾಣ, ಕುಡಿಯುವ ನೀರಿನ ಸೌಕರ್ಯ, ಬೀದಿ ದೀಪ, ಚರಂಡಿ, ರಸ್ತೆ ನಿರ್ಮಾಣ, ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ಕೇಂದ್ರಗಳ ನಿರ್ಮಾಣ ಮಾಡಿಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿಕೊಂಡರು.
ಸೌಲಭ್ಯ ವಂಚಿತ ಬನ್ನೂರು ಗ್ರಾಮ ಪಂಚಾಯಿತಿಯನ್ನು ಸಮಗ್ರ ಅಭಿವೃದ್ಧಿಗೊಳಿಸಿ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಶಪಥ ಮಾಡಿದೆ.
ರಾಹುಲ್ ಶಿಂಧೆ ಅವರೊಂದಿಗೆ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ನೀರು ಸರಬರಾಜು ಇಲಾಖೆಯ ಇಇ ಕಿರಣ ಘೋರ್ಪಡೆ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಚೇತನ್ಕುಮಾರ, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಐನಾಪೂರ, ಬಿಇಒ ಸುರೇಂದ್ರ ಕಾಂಬಳೆ ಸೇರಿದಂತೆ ಜಿಲ್ಲಾಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.