ADVERTISEMENT

ಭಾರತೀಯ ಮಹಿಳೆಯರಲ್ಲಿದೆ ಅದ್ಭುತ ಶಕ್ತಿ: ವಿಜ್ಞಾನಿ ಡಾ.ಟೆಸ್ಸಿ ಥಾಮಸ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:15 IST
Last Updated 4 ಫೆಬ್ರುವರಿ 2020, 9:15 IST
ಗೋಕಾಕ ಶೂನ್ಯ ಸಂಪಾದನ ಮಠದ ಲಿಂ. ಬಸವ ಸ್ವಾಮೀಜಿ ಅವರ 15ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಸೋಮವಾರ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ವಿಜ್ಞಾನಿ ಡಾ. ಟೆಸ್ಸಿ ಥಾಮಸ್ ಅವರಿಗೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಗೋಕಾಕ ಶೂನ್ಯ ಸಂಪಾದನ ಮಠದ ಲಿಂ. ಬಸವ ಸ್ವಾಮೀಜಿ ಅವರ 15ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಸೋಮವಾರ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ವಿಜ್ಞಾನಿ ಡಾ. ಟೆಸ್ಸಿ ಥಾಮಸ್ ಅವರಿಗೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಗೋಕಾಕ: ‘ಭಾರತೀಯ ಮಹಿಳೆಯರಲ್ಲಿ ಅತ್ಯದ್ಭುತ ಶಕ್ತಿ ಇದೆ. ಶಿಸ್ತು, ಸಂಯಮ, ಕಾರ್ಯಕ್ಷಮತೆಯಿಂದ ಮನಪೂರ್ವಕವಾಗಿ ಮುನ್ನುಗ್ಗಿದರೆ ಸಾಧಕರಾಗಲು ಸಾಧ್ಯ’ ಎಂದು ವಿಜ್ಞಾನಿ ಡಾ. ಟೆಸ್ಸಿ ಥಾಮಸ್ ಹೇಳಿದರು.

ಸೋಮವಾರ ಸಂಜೆ ಇಲ್ಲಿನ ಶೂನ್ಯ ಸಂಪಾದನಮಠದ ಲಿಂ. ಬಸವ ಸ್ವಾಮೀಜಿ ಅವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಶ್ರೀಮಠದಿಂದ ನೀಡಲಾದ ₹ 1 ಲಕ್ಷ ಒಳಗೊಂಡ ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ತಾಯಿಯಿಂದ ಜಗತ್ತು ಪ್ರಾರಂಭವಾಗುತ್ತದೆ. ಜೀವನದಲ್ಲಿ ಎಲ್ಲ ಬದಲಾವಣೆಯೂ ತಾಯಿಯಿಂದಲೇ ಆಗುತ್ತದೆ’ ಎಂದರು.

ADVERTISEMENT

‘ಡಾ.ಎ.ಪಿ.ಜಿ. ಅಬ್ದುಲ್‌ ಕಲಾಂ ಅವರ ಕೈ ಕೆಳಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನನ್ನ 33 ವರ್ಷಗಳ ಸಾರ್ಥಕ ಸೇವೆ ಭಾರತಕ್ಕೆ ಮೀಸಲಾಗಿದೆ. ಭಾರತಕ್ಕೆ ಚಾಲಕರಹಿತ ಯುದ್ಧವಿಮಾನ ತಯಾರಿಸುತ್ತೇವೆ. ಸುಸಜ್ಜಿತ ಡ್ರೋಣ್‌ಗಳ ನಿರ್ಮಾಣದಿಂದ ಭಾರತವನ್ನು ಸ್ವಸಮರ್ಥರನ್ನಾಗಿ ಮಾಡುವುದು ನಮ್ಮ ಗುರಿ’ ಎಂದು ಹೇಳಿದರು.

‘ಇಂದು ಜನರ ಕೈಯಲ್ಲಿ ಎಲ್ಲ ಮಾಹಿತಿ ಇದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಪಯುಕ್ತವಾದುದನ್ನಷ್ಟೇ ಬಳಸಿಕೊಳ್ಳಬೇಕು. ಅನುಪಯುಕ್ತ ಯಾವುದು ಎನ್ನುವುದನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.

ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರನ್ನು ಗೌರವಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಆನಂದಪುರದ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶಿಗ್ಗಾಂವಿಯ ಪ್ರಗತಿಪರ ರೈತ ಮಹಿಳೆ ರಾಜೇಶ್ವರಿ ಪಾಟೀಲ ಮಾತನಾಡಿದರು. ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ, ಡಾ.ಮಂಗಲಾ ಕಮತ, ಸರಸ್ವತಿ ಪೂಜೇರಿ, ಪಾರ್ವತಿ ಪಾಟೀಲ, ಮಹಾದೇವಿ ಹಿರೇಮಠ, ಚೇತನಾ ಪಾಗದ, ವಿಜಯಲಕ್ಷ್ಮಿ ಸಿದ್ದಾಪೂರಮಠ, ನೇತ್ರಾವತಿ ಲಾತೂರ, ಡಾ.ಕೀರ್ತಿ ಬೀರನಗಡ್ಡಿ, ಡಾ.ಹೇಮಾ ಕಲ್ಲೋಳಿ, ಶಕುಂತಲಾ ಕಟ್ಟಿ ಇದ್ದರು.

ಶಿಕ್ಷಕ ಎಸ್.ಕೆ. ಮಠದ ಸ್ವಾಗತಿಸಿದರು. ಶಿಕ್ಷಕ ಆರ್.ಎಲ್. ಮಿರ್ಜಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.