ಮೋಳೆ: ‘ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದು ಬಂದು ಹದಿನಾಲ್ಕು ತಿಂಗಳುಗಳಲ್ಲೇ ಪಕ್ಷದ ಬೆನ್ನಿಗೆ ಚೂರಿ ಹಾಕಿ ಮತದಾರರಿಗೆ ದ್ರೋಹ ಬಗೆದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅವರಿಗೆ ತಕ್ಕ ಶಾಸ್ತಿ ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೋರಿದರು.
ಕಾಗವಾಡ ಕ್ಷೇತ್ರದ ಮಂಗಸೂಳಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ರಾಜು ಕಾಗೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಪಕ್ಷ ಹಾಗೂ ಮತದಾರರಿಗೆ ಮೋಸ ಮಾಡುವವರು ಹೆತ್ತ ತಾಯಿಗೆ ಮೋಸ ಮಾಡಿದಂತೆಯೇ. ಇಂಥ ಪಕ್ಷ ದ್ರೋಹಿಗಳಿಗೆ ಮತ ಹಾಕಬೇಕಾ?’ ಎಂದು ಕೇಳಿದರು.
‘ನಮ್ಮ ಜೊತೆಯಲ್ಲೇ ಇದ್ದು, ಸಾವಿರ ಕೋಟಿ ರೂಪಾಯಿ ಕೊಟ್ಟರೂ ಬೇರೆ ಪಕ್ಷಕ್ಕೆ ಹೋವುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ರಾತ್ರೋರಾತ್ರಿ ಪರಾರಿಯಾದರು’ ಎಂದು ಟೀಕಿಸಿದರು.
‘ನಿಮ್ಮನ್ನು 5 ವರ್ಷಗಳ ಅವಧಿಗೆ ಆಯ್ಕೆ ಮಾಡಿ ಕಳುಹಿಸಿದ್ದೇವೆಯೇ ಹೊರತು 14 ತಿಂಗಳುಗಳಿಗಲ್ಲ ಎಂದು ಮತದಾರರು ಪ್ರಶ್ನಿಸಬೇಕು’ ಎಂದರು.
ಮುಖಂಡ ಮೋಹನರಾವ್ ಶಹಾ ಮಾತನಾಡಿ, ‘ಮತದಾರರು ಹಾಗೂ ಕಾರ್ಯಕರ್ತರಿಗೆ ವಿಶ್ವಾಸದ್ರೋಹ ಬಗೆದು ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಿ ಹೋದವರಿಗೆ ಜನರ ಶಾಪ ತಟ್ಟದಿರದು. ಅವರಿಂದಾಗಿ ಕ್ಷೇತ್ರದಕ್ಕೆ ಕಳಂಕವಾಗಿದೆ’ ಎಂದು ಆರೋಪಿಸಿದರು.
ಮುಖಂಡ ಶಹಜಹಾನ್ ಡೊಂಗರಗಾಂವ, ಅಭ್ಯರ್ಥಿ ರಾಜು ಕಾಗೆ ಮಾತನಾಡಿದರು.
ಶಾಸಕ ಆನಂದ ನ್ಯಾಮಗೌಡರ, ಮುಖಂಡರಾದ ಕಾಕಾ ಪಾಟೀಲ, ದಿಗ್ವಿಜಯ ಪವಾರದೇಸಾಯಿ, ಲಕ್ಷ್ಮಣರಾವ್ ಚಿಂಗಳೆ, ವಿಜಯಕುಮಾರ ಅಕಿವಾಟೆ, ರವೀಂದ್ರ ಗಾಣಿಗೇರ, ಶಿದಗೌಡ ಪಾಟೀಲ, ಗಜಾನನ ಯರಂಡೋಲಿ, ಸಂಜಯ ಭಿರಡಿ, ಆದಿನಾಥ ದಾನೊಳ್ಳಿ, ವಿದ್ಯಾ ಹಿರೇಮಠ, ಸುನೀತಾ ಹುರಕಡ್ಲಿ, ಸಂಜಯ ತಳವಲಕರ, ಚಿದಾನಂದ ಮಾಳಿ, ಸಂಜಯ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.