ಚನ್ನಮ್ಮನ ಕಿತ್ತೂರು: ದರೋಡೆ, ಅತ್ಯಾಚಾರ, ಸರಗಳವು ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ದರೋಡೆಕೋರ ರಮೇಶ ಉದ್ದಪ್ಪ ಕಿಲಾರಿಗೆ ಈಚೆಗೆ ಗುಂಡೇಟು ಹೊಡೆದು ಬಂಧಿಸಿದ್ದ ಕಿತ್ತೂರು ಪೊಲೀಸರು, ಆತನ ಜೊತೆಗಿದ್ದ ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಗೋಕಾಕ ತಾಲ್ಲೂಕಿನ ಉರಬಿನಹಟ್ಟಿಯ ಬಾಳನಗೌಡ ಅಲಿಯಾಸ್ ಬಾಳೇಶ ಬಸವರಾಜ ಮಂಗೊಜಿ (19) ಬಂಧಿತ.
ಮೂಡಲಗಿ ಮತ್ತು ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಡಿದ್ದ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು, ಬಂಧಿತರಿಂದ 43 ಗ್ರಾಂ ಚಿನ್ನಾಭರಣ ಮತ್ತು ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
‘ಬೈಕ್ ಮೇಲೆ ಬಂದಿದ್ದ ಇಬ್ಬರು ಎಂ.ಕೆ. ಹುಬ್ಬಳ್ಳಿಯ ಪೊಲೀಸ್ ಉಪಠಾಣೆ ಬಳಿ ಇರುವ ಹನುಮಂತ ದೇವರ ಗುಡಿಯ ಸಮೀಪ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ಡಿವೈಎಸ್ ಪಿ. ವೀರಯ್ಯ ಹಿರೇಮಠ ಶುಕ್ರವಾರ ತಿಳಿಸಿದರು.
‘ಅದಕ್ಕೂ ಮುನ್ನ ಇಂಚಲ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಆ ಮಹಿಳೆ ಹಿಂದೆ ಬಾಗಿದ್ದರಿಂದ ಸಾಧ್ಯವಾಗಿರಲಿಲ್ಲ’ ಎಂದು ತಿಳಿಸಿದರು.
₹50 ಲಕ್ಷ ಮೌಲ್ಯದ ಚಿನ್ನಾಭರಣ: ‘ಅಂದಾಜು 6 ತಿಂಗಳ ಅವಧಿಯಲ್ಲಿ ವಿವಿಧೆಡೆ ನಡೆದ ಮನೆಗಳ್ಳತನ, ಸರಗಳ್ಳತನ ಪ್ರಕರಣಗಳಲ್ಲಿ ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಿತ್ತೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಪೊಲೀಸ್ ಮೂಲ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.