ADVERTISEMENT

ಕಿತ್ತೂರಲ್ಲಿ ಉತ್ಖನನ, ಕ್ಷೇತ್ರಕಾರ್ಯ ಆಗಲಿ

ರಾಜ್ಯಮಟ್ಟದ ವಿಚಾರ ಸಂಕಿರಣ: ಜಾನಪದ ವಿದ್ವಾಂಸ ಸಿ.ಕೆ.ನಾವಲಗಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 5:01 IST
Last Updated 26 ಅಕ್ಟೋಬರ್ 2025, 5:01 IST
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಪ್ರೊ.ಸಿ.ಕೆ.ನಾವಲಗಿ, ಪದ್ಮಿನಿ ನಾಗರಾಜ ದೀಪ ಬೆಳಗಿಸಿದರು
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಪ್ರೊ.ಸಿ.ಕೆ.ನಾವಲಗಿ, ಪದ್ಮಿನಿ ನಾಗರಾಜ ದೀಪ ಬೆಳಗಿಸಿದರು   

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಉತ್ಸವಕ್ಕೆ ಸಂಭ್ರಮ, ಸಡಗರಗಳೂ ಬೇಕು. ಆದರೆ, ಅದಕ್ಕಿಂತಲೂ ಮುಖ್ಯವಾಗಿ ವೀರರಾಣಿ ಚನ್ನಮ್ಮ ಮತ್ತು ಕಿತ್ತೂರು ಸಂಸ್ಥಾನದ ನೈಜ ಇತಿಹಾಸ ಬೆಳಕಿಗೆ ತರುವ ನಿಟ್ಟಿನಲ್ಲಿ ಉತ್ಖನನ, ಕ್ಷೇತ್ರಕಾರ್ಯ ನಡೆಯಬೇಕಿದೆ’ ಎಂದು ಜಾನಪದ ವಿದ್ವಾಂಸ ಪ್ರೊ.ಸಿ.ಕೆ. ನಾವಲಗಿ ಅಭಿಪ್ರಾಯಪಟ್ಟರು

ಇಲ್ಲಿನ ಕೋಟೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಸಂಸ್ಥಾನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗಿದ್ದ ಬ್ರಿಟಿಷರಿಗೆ ಸೋಲುಣಿಸಿದ್ದು ಕಿತ್ತೂರಿನ ಚಿಕ್ಕ ಸಂಸ್ಥಾನ. ಆದರೆ, ಅದರ ಇತಿಹಾಸದ ಬಗ್ಗೆ ಇಂದಿಗೂ ಅಸ್ಪಷ್ಟತೆ ಇದೆ. ದಶಕಗಳಿಂದ ಹಲವು ಗೊಂದಲ ಉಳಿದಿವೆ. ಅವುಗಳನ್ನು ದೂರಗೊಳಿಸಿ, ಗಟ್ಟಿಯಾದ ಇತಿಹಾಸ ಕಟ್ಟಿಕೊಡುವ ಅಗತ್ಯವಿದೆ. ಹಾಗಾಗಿ ಪರಿಣತರ ನೇತೃತ್ವದಲ್ಲಿ ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಎಲ್ಲ ಪ್ರದೇಶಗಳಲ್ಲಿ ಕ್ಷೇತ್ರಕಾರ್ಯ ನಡೆಸಬೇಕು’ ಎಂದು ಪ್ರತಿಪಾದಿಸಿದರು

ADVERTISEMENT

‘ಕಿತ್ತೂರು ಸಂಸ್ಥಾನದಲ್ಲಿ ಬಳಸುತ್ತಿದ್ದ ಅನೇಕ ವಸ್ತುಗಳು ಕಿತ್ತೂರಿನ ಹಲವರ ಮನೆಗಳಲ್ಲಿ ಇಂದಿಗೂ ಕಾಣಸಿಗುತ್ತವೆ. ಆ ಇತಿಹಾಸ ಪ್ರಚುರಪಡಿಸುವ ದಿಸೆಯಲ್ಲಿ ಅವುಗಳನ್ನು ಹೆಕ್ಕಿ ತೆಗೆಯಬೇಕಿದೆ. ಐತಿಹಾಸಿಕ ಕಿತ್ತೂರಿನ ನೆಲದಲ್ಲಿ ಸರಿಯಾಗಿ ಉತ್ಖನನ ನಡೆಯಬೇಕಿದೆ’ ಎಂದರು.

‘ದೇಸಗತಿ ಮನೆತನದ ಚನ್ನಮ್ಮಳಲ್ಲಿ ಪರಂಪರಾಗತವಾಗಿ ಶೌರ್ಯ, ಸಾಹಸದ ಗುಣಗಳು ಬೆಳೆದು ಬಂದಿದ್ದವು. ತನ್ನ ಸೇನೆಯೊಂದಿಗೆ ಬ್ರಿಟಿಷರನ್ನು ಮಣಿಸಿದ ಚನ್ನಮ್ಮ ಸಾಮಾನ್ಯಳಲ್ಲ. ಆಕೆ ಯುದ್ಧ
ವೀರಳು, ಧೀರಳು ಮತ್ತು ಧರ್ಮವೀರಳು ಆಗಿದ್ದಳು’ ಎಂದು ಶ್ಲಾಘಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಶಾಸಕ ಬಾಬಾಸಾಹೇಬ ಪಾಟೀಲ, ‘ಕಿತ್ತೂರು ಸಂಸ್ಥಾನದ ನೈಜ ಇತಿಹಾಸ ಹೊರತರಲು ಇಂದು ಗಟ್ಟಿಯಾದ ಸಂಶೋಧನೆಗಳು ನಡೆಯಬೇಕಿದೆ. ಈ ವಿಷಯವಾಗಿ ಪಿಎಚ್.ಡಿ ಮಾಡುವವರಿಗೆ ವೈಯಕ್ತಿಕವಾಗಿ ಸಹಾಯ, ಸಹಕಾರ ನೀಡುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರುವಂತೆ, ಸಾಹಿತ್ಯ ಕಾರ್ಯಕ್ರಮಗಳಲ್ಲೂ ಸೇರಬೇಕು’ ಎಂದರು.

ಡಿಡಿಪಿಐ ಲೀಲಾವತಿ ಹಿರೇಮಠ, ‘ಯುವಜನಾಂಗವನ್ನು ಇತಿಹಾಸದ ಜ್ಞಾನದೊಂದಿಗೆ ಗಟ್ಟಿಗೊಳಿಸಬೇಕಿದೆ. ಜತೆಗೆ ಕಿತ್ತೂರಿನ ಕೊಡುಗೆಯನ್ನು ಎತ್ತಿ ಹಿಡಿದು, ಇಡೀ ನಾಡಿಗೆ ಸಾರಬೇಕಿದೆ. ಇದಕ್ಕಾಗಿ ಇಂಥ ಗೋಷ್ಠಿಗಳು ಅವಶ್ಯಕ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿಗಳಾದ ಪದ್ಮಿನಿ ನಾಗರಾಜ, ಪ್ರೊ.ಎಂ.ಎಸ್.ಇಂಚಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಸಿ.ವೈ.ತುಬಾಕಿ, ರವಿ ಭಜಂತ್ರಿ, ಆರ್. ಆಂಜನೇಯ, ಕೆ.ರಾಮಪ್ಪ ಇದ್ದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.

ಕಾಳಜಿ ತೋರಿದ ‘ಪ್ರಜಾವಾಣಿ’

‘ಕಿತ್ತೂರು ಮಣ್ಣಿನ ಪ್ರತಿಕಣದಲ್ಲೂ ಇತಿಹಾಸ ಅಡಗಿದೆ. ಅದೆಲ್ಲವನ್ನೂ ಹೊರಗೆ ತರಬೇಕಾದರೆ ಉತ್ಖನನಕ್ಕೆ ಆದ್ಯತೆ ನೀಡಬೇಕು. ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆ ವಿಸ್ತೃತವಾದ ದಾಖಲಾತಿಗಳೊಂದಿಗೆ ವರದಿ ಮಾಡಿದೆ. ಪತ್ರಿಕೆ ತೋರಿದ ಕಾಳಜಿಯನ್ನು ಸರ್ಕಾರವೂ ತೋರಬೇಕು’ ಎಂದು ಪ್ರೊ.ಸಿ.ಕೆ.ನಾವಲಗಿ ಪ್ರತಿಪಾದಿಸಿದರು. ‘ರಾಣಿ ಚನ್ನಮ್ಮ ಕುದುರೆ ಏರಿದ್ದನ್ನು ಮಾತ್ರ ನಾವು ರೂಪಕದಲ್ಲಿ ಕಾಣುತ್ತೇವೆ. ಆದರೆ ರಥವನ್ನೂ ಏರಿದ್ದಳು ಎಂಬುದರ ಕಲ್ಪನೆಯೂ ಇಲ್ಲ. ಆದರೆ ಆಕೆ ರಥದಲ್ಲಿ ಸಂಚಾರ ಮಾಡಿದ ಬಗ್ಗೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲಹಳ್ಳಿಯ ಭುಜಬಲ ಹನಮಗೊಂಡ ಅವರ ಮನೆ ಪಕ್ಕದ ಖಾಲಿಜಾಗದಲ್ಲಿ ಚಕ್ರದ ಅವಶೇಷಗಳು ಸಿಕ್ಕಿವೆ. ಇವುಗಳ ಬಗ್ಗೆಯೂ ‘ಪ್ರಜಾವಾಣಿ’ ಮೊದಲ ಬಾರಿಗೆ ಬೆಳಕು ಚೆಲ್ಲಿದೆ. ಇಂಥ ಎಲ್ಲ ಸಂಗತಿಗಳು ಹೊರಬರಬೇಕೆಂದರೆ ಕ್ಷೇತ್ರಕಾರ್ಯ ನಡೆಯಬೇಕು’ ಎಂದೂ ಹೇಳಿದರು.