
ಪ್ರಭಾಕರ ಕೋರೆ
ಬೆಳಗಾವಿ: ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಷ್ಠಿತ ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್ಇ) ಸಂಸ್ಥೆ ಆರಂಭವಾಗಿ 109 ವರ್ಷ ಕಳೆದಿವೆ. ಯಾವುದೇ ಬಂಡವಾಳ ಇಲ್ಲದ ಕಾಲದಲ್ಲಿ ಏಳು ಶಿಕ್ಷಕರು (ಸಪ್ತರ್ಷಿಗಳು) ಛಲ, ತ್ಯಾಗ, ದಾನದ ಮೂಲಕ ಸಮಾಜದ ಅಭ್ಯುದಯಕ್ಕಾಗಿ ಇದನ್ನು ಕಟ್ಟಿ ಬೆಳೆಸಿದರು. ಈಗ 110ನೇ ವರ್ಷದಲ್ಲಿ ಕಾಲಿಟ್ಟುದ್ದು (ನ.13) ಸಂಭ್ರಮ ಮನೆ ಮಾಡಿದೆ.
ರಾವ್ಬಹಾದ್ಧೂರ ಅರಟಾಳ ರುದ್ರಗೌಡರು, ರಾವ್ಬಹಾದ್ದೂರ ವಿ.ಜಿ.ನಾಯಕ ಚಚಡಿ ದೇಸಾಯಿ ಅವರು, ರಾವ್ ಬಹಾದ್ದೂರ ವೈಜಪ್ಪ ಅಡಿವೆಪ್ಪ ಅನಿಗೋಳ ಅವರು ಸಂಸ್ಥಾಪಕರು. ಶಿರಸಂಗಿ ಲಿಂಗರಾಜರು, ರಾಜಾ ಲಖಮಗೌಡರು, ಬಿ.ವಿ.ಭೂಮರಡ್ಡಿ ಅವರು ಮಹಾದಾನಿಗಳಾಗಿ ಬಂದರು.
ಸಪ್ತರ್ಷಿಗಳಾದ ಪಂಡಿತಪ್ಪ ಚಿಕ್ಕೋಡಿ, ಪ್ರೊ.ಎಂ.ಆರ್.ಸಾಖರೆ, ಬಿ.ಬಿ.ಮಮದಾಪುರ, ಪ್ರೊ.ಶಿ.ಶಿ.ಬಸವನಾಳ, ಎಚ್.ಎಫ್.ಕಟ್ಟಿಮನಿ, ಬಿ.ಎಸ್.ಹಂಚಿನಾಳ, ಸರದಾರ ವೀರನಗೌಡ ಪಾಟೀಲ ಸಂಸ್ಥೆಗೆ ಜೀವ ತುಂಬಿದರು. ವರಲ್ಲಿ ಬಹುತೇಕರು ಲಿಂ.ಅರಟಾಳ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪ ಸೇರಿ ಸ್ಥಾಪಿಸಿದ ಲಿಂಗಾಯತ ಫಂಡ್ನಿಂದ ಶಿಷ್ಯವೇತನ ಪಡೆದು ಪದವೀಧರರಾಗಿದ್ದರು. ಅವರ ಮೇಲೆ ಸಮಾಜದ ಋಣಭಾರ ಇತ್ತು. ಅದನ್ನು ನೀಗಿಸಲು ಈ ಏಳು ಶಿಕ್ಷಕರೂ ಬ್ರಿಟಿಷ್ ಆಡಳಿತದಲ್ಲಿ ಸುಲಭವಾಗಿ ದಕ್ಕುತ್ತಿದ್ದ ಉನ್ನತ ಹುದ್ದೆಗೆ ಆಸೆ ಪಡಲಿಲ್ಲ. ಖಚಿತ ವೇತನದ ಯಾವ ಭರವಸೆ ಇಲ್ಲದಾಗಲೂ ಮಾಸ್ತರಿಕೆ ಮಾಡಲು ಒಪ್ಪಿ, ಬೆಳಗಾವಿಯಲ್ಲೇ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ನಿರ್ಧರಿಸಿದರು.
ಮನೆ–ಮನೆಗೆ ತಿರುಗಾಡಿ ದೇಣಿಗೆ ಸಂಗ್ರಹಿಸಿ, ಸಂಸ್ಥೆಗೆ ಭದ್ರ ಅಡಿಪಾಯ ಹಾಕಿದರು. ಶಿಕ್ಷಣ ನೀಡುವುದಷ್ಟೇ ಅಲ್ಲ; ಅಖಂಡ ಕರ್ನಾಟಕ ನಿರ್ಮಾಣಕ್ಕೆ ಪಣ ತೊಟ್ಟು ಹೋರಾಟ ಮಾಡಿದರು. ಮರಾಠಿಗರ ಮಧ್ಯೆ ನೆಲೆನಿಂತು ಕನ್ನಡದ ನಂದಾದೀಪ ಬೆಳಗಿದರು.–ಬಿ.ಎಸ್.ಗವಿಮಠ, ಆಜೀವ ಸದಸ್ಯ, ಕೆಎಲ್ಇ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.