ಬೆಳಗಾವಿ: ‘ನಾಡಿನ ಸಂಸ್ಕೃತಿ ಉಳಿಸಿ–ಬೆಳೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.
ಇಲ್ಲಿ ಸೋಮವಾರ ನಡೆದ ಕ್ರಾಂತಿ ಮಹಿಳಾ ಮಂಡಳದ 13ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರಾಂತಿ ಮಹಿಳಾ ಮಂಡಳದವರು ಮಹಿಳೆಯರ ಸಬಲೀಕರಣಕ್ಕಾಗಿ ಕಲಾಬಿಂಬ ಮೊದಲಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, 6 ವಿದ್ಯಾರ್ಥಿನಿಯರನ್ನು ಶೈಕ್ಷಣಿಕವಾಗಿ ದತ್ತು ಪಡೆದಿರುವುದು ಶ್ಲಾಘನೀಯ’ ಎಂದರು.
ದೃಷ್ಟಿದೋಷವುಳ್ಳ ವಿದ್ಯಾರ್ಥಿನಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಸಮ್ಮ ಮಠದ ಅವರನ್ನು ಸತ್ಕರಿಸಲಾಯಿತು. ಸರ್ವಾನುಮತದಿಂದ ಆಯ್ಕೆಯಾದ ಕಾರ್ಯಕಾರಿ ಮಂಡಳಿಯ ನೂತನ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ರತ್ನಶ್ರೀ ಗುಡೇರ, ಹೇಮಾ ಬರಬರಿ, ಗೀತಾ ಎಮ್ಮಿ, ಮಮತಾ ಅಂಟಿನ, ಶೋಭಾ ಕಾಡನ್ನವರವರ ಹಾಡಿದರು. ರಾಜಶ್ರೀ ಕಾಗವಾಡ ಸ್ವಾಗತಿಸಿದರು. ಶೋಭಾ ಅರಬಳ್ಳಿ ಮತ್ತು ರೇಣುಕಾ ಕಾಂಬಳೆ ಪರಿಚಯಿಸಿದರು. ಕಾರ್ಯದರ್ಶಿ ತ್ರಿಶಲಾ ಪಾಯಪ್ಪನ್ನವರ ವರದಿ ಮಂಡಿಸಿದರು. ದರ್ಶನಾ ನಿಲಜಗಿ ಲೆಕ್ಕಪತ್ರ ಪ್ರಸ್ತುತಪಡಿಸಿದರು. ಪುಷ್ಪಾ ನಿಲಜಗಿ ನಿರೂಪಿಸಿದರು. ಆಶಾ ನಿಲಜಗಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.