ಚಿಕ್ಕೋಡಿ: ‘ಹೊಳಿ ಏರಿದಂಗ ಮನ್ಯಾಗ ಹಾವು, ಚೇಳು ಬರಾಕತ್ತಾವ್ರಿ. ಮಾಡಿರೋ ಲಾವಣಿ ನೀರಾಗ ನಿಂತೈತ್ರಿ. ನದಿ ನೀರು ಯಾವಾಗ ಇಳಿತೈತಿ ಅಂತ ಕಾಯಾಕತ್ತೇವ್ರಿ...’
ತಾಲ್ಲೂಕಿನ ಅಂಕಲಿಯ ಹೌಸಾಬಾಯಿ ಜಾಧವ ‘ಪ್ರಜಾವಾಣಿ’ ಮುಂದೆ ಹೀಗೆ ಅವಲತ್ತುಕೊಂಡರು.
ಇದು ಅವರೊಬ್ಬರ ಸಮಸ್ಯೆಯಲ್ಲ. ಕೃಷ್ಣಾ ನದಿಪಾತ್ರದ ಗ್ರಾಮಗಳಲ್ಲಿ ಇರುವ ಬಹುತೇಕರದ್ದು ಇದೇ ಸಂಕಷ್ಟ.
‘ಹೊಳಿ ದಂಡಿಗೆ ನಮ್ಮ ಹೊಲ ಐತ್ರಿ. ಸಾಮಾನುಗಳನ್ನು ಗಂಟುಮೂಟೆ ಕಟ್ಟಿ ಇಟ್ಟೇವ್ರಿ. ಹೊಳಿ ಏರತಂದ್ರ ಸಾಮಾನುಗಳನ್ನು ಹೇರಕೊಂಡ ಊರ ಕಡೆ ಹೋಗಬೇಕ್ರಿ’ ಎಂದು ಕಲ್ಲೋಳ ಗ್ರಾಮದ ಮಲ್ಲಪ್ಪ ಶೇಡಬಾಳೆ ಹೇಳಿದರು.
ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇರುವುದು ನದಿಪಾತ್ರದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಕೆಲವೆಡೆ ಹೊಲಗಳಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಸುರಕ್ಷಿತ ಸ್ಥಳಗಳತ್ತ ಹೋಗುತ್ತಿದ್ದಾರೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳ ನೀರು ನೂರಾರು ಎಕರೆ ಕೃಷಿಭೂಮಿಗೆ ನುಗ್ಗಿದೆ.
ರೈತರು ಹೆಚ್ಚಾಗಿ ಕಬ್ಬು ಬೆಳೆದಿದ್ದಾರೆ. ಹಾಗಾಗಿ ಸದ್ಯಕ್ಕೆ ಆತಂಕವಿಲ್ಲ. ಆದರೆ, ಸತತ 15 ದಿನಗಳವರೆಗೆ ನೀರು ನಿಂತರೆ ಬೆಳೆ ಕೊಳೆಯುವ ಸಾಧ್ಯತೆ ಇದೆ.
Highlights - ಪ್ರವಾಹದ ನಂತರ ಹುಳುಗಳ ಕಾಟ ಸುರಕ್ಷಿತ ಸ್ಥಳಗಳತ್ತ ಸ್ಥಳಾಂತರಗೊಳ್ಳುತ್ತಿರುವ ಜನ ಬೆಳೆ ಕೊಳೆಯುವ ಆತಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.