ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಬಳಿಯಲ್ಲಿ ದತ್ತ ಮಂದಿರ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿರುವದು.
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಕೃಷ್ಣಾ ನದಿಯ ಹರಿವು ಬುಧವಾರ ಸಂಜೆ ವೇಳೆಗೆ 1,81,004 ಕ್ಯೂಸೆಕ್ ನಷ್ಟು ಹೆಚ್ಚಳವಾಗಿದೆ. ಹೀಗಾಗಿ ಉಪ ವಿಭಾಗದ ಕೃಷ್ಣಾ ಹಾಗೂ ಉಪನದಿಗಳ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಶುರುವಾಗಿದೆ.
ಉಪವಿಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ 10ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿವೆ.
ಮಹಾರಾಷ್ಟ್ರ ಕೃಷ್ಣಾ ನದಿಯ ಜಲಾನಯನ ಪ್ರದೇಶದ ಕೊಯ್ನಾದಲ್ಲಿ 27 ಸೆಂ.ಮೀ, ವಾರಣಾ - 10 ಸೆಂ.ಮೀ, ಕಾಳಮ್ಮವಾಡಿಯಲ್ಲಿ 10.06 ಸೆಂ.ಮೀ, ಮಹಾಬಳೇಶ್ವರ- 30.08 ಸೆಂ.ಮೀ, ನವಜಾ- 38.7 ಸೆಂ.ಮೀ, ರಾಧಾನಗರಿ- 17.3 ಸೆಂ.ಮೀ, ಸಾಂಗ್ಲಿ- 1.9 ಸೆಂ.ಮೀ, ಕೊಲ್ಹಾಪುರ- 2.6 ಸೆಂ. ಮೀ ಯಷ್ಟು ಮಳೆಯು ಬುಧವಾರ ದಾಖಲಾಗಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ಜನವಸತಿ ಪ್ರದೇಶಕ್ಕೆ ದೂಧಗಂಗಾ ನದಿ ನೀರು ನುಗ್ಗಿದ್ದರಿಂದ ಜಾನುವಾರುಗಳೊಂದಿಗೆ ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ತೆರಳಿದರು.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 1,41,500 ಕ್ಯೂಸೆಕ್ , ಸದಲಗಾ ಪಟ್ಟಣದ ಬಳಿಯಲ್ಲಿ ದೂಧಗಂಗಾ ನದಿಗೆ 39,504 ಕ್ಯೂಸೆಕ್ ಇದ್ದು, ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಯ ಹೊರ ಹರಿವು 1,81,004 ಕ್ಯೂಸೆಕ್ ಇದೆ.
ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮವಾಗಿ ನದಿ ತೀರದಲ್ಲಿರುವ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಹತ್ತಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನದಿ ತೀರದಲ್ಲಿರುವ ಹತ್ತಾರು ದೇವಾಲಯ ಹಾಗೂ ದರ್ಗಾಗಳು, ಕಬ್ಬು, ಶೇಂಗಾ, ಸೋಯಾಬಿನ್ ಮುಂತಾದ ಬೆಳೆಗಳು ಜಲಾವೃತಗೊಂಡಿವೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಸಿಂಧೆ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾಂವಿ, ಮುಂತಾದವರು ತಾಲ್ಲೂಕಿನ ಮಾಂಜರಿ ಗ್ರಾಮದ ಸೇತುವೆ ಬಳಿ ಕೃಷ್ಣಾ ನದಿಯ ಹರಿವು ವೀಕ್ಷಿಸಿ, ಸ್ಥಳೀಯ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.