ADVERTISEMENT

‘ರೈತರಿಗೆ ಮರಣಶಾಸನ ಬರೆದಿರುವ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:20 IST
Last Updated 5 ಡಿಸೆಂಬರ್ 2020, 15:20 IST
ಪರಮಾನಂದವಾಡಿಯ ಗ್ರಾಮದ ಕಲ್ಮೇಶ್ವರ ನಗರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಅಭಿನವ ಕಲ್ಮೇಶ್ವರ ಸ್ವಾಮೀಜಿ ಹಾಗೂ ಮುಖಂಡರು ಉದ್ಘಾಟಿಸಿದರು
ಪರಮಾನಂದವಾಡಿಯ ಗ್ರಾಮದ ಕಲ್ಮೇಶ್ವರ ನಗರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕವನ್ನು ಅಭಿನವ ಕಲ್ಮೇಶ್ವರ ಸ್ವಾಮೀಜಿ ಹಾಗೂ ಮುಖಂಡರು ಉದ್ಘಾಟಿಸಿದರು   

ಪರಮಾನಂದವಾಡಿ: ‘ಕೊರೊನಾಕ್ಕೆ ಹೆದರಿ ಜನರು ರಸ್ತೆಗೆ ಇಳಿಯದ ಸಮಯದಲ್ಲಿ ಸರ್ಕಾರ ಎಪಿಎಂಸಿ ಹಾಗೂ ಭು ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ವಿದ್ಯುತ್ ಖಾಸಗೀಕರಣ ಮಾಡಿದೆ. ಈ ಮೂಲಕ ರೈತರಿಗೆ ಮರಣ ಶಾಸನ ಬರೆಯಲಾಗುತ್ತಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಕಲ್ಮೇಶ್ವರ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಕಾರ್ಪೊರೇಟ್ ಕಂಪನಿಗಳು ಸುಲಭವಾಗಿ ಭೂಮಿ ಖರೀದಿಸಲು ರತ್ನಗಂಬಳಿ ಹಾಸಿದ್ದಾರೆ. ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಹೀಗಾಗಿ, ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಬೇಕು. ಕೃಷಿಕರ ಬಗ್ಗೆ ಬೇಜವಾಬ್ದಾರಿ ತಾಳಿರುವುದನ್ನು ಖಂಡಿಸಬೇಕು. ಕೃಷಿಕರಿಗೆ ಮಾರಕವಾದ ಕಾಯ್ದೆಗಳನ್ನು ಹಿಂಪಡೆಯುವರೆಗೆ ಪ್ರಾಮಾಣಿಕವಾಗಿ ಹೋರಾಡಬೇಕು’ ಎಂದು ತಿಳಿಸಿದರು.

ADVERTISEMENT

ಸಮೀಪದ ಶಿರಗೂರದ ಕಲ್ಮೇಶ್ವರ ಆಶ್ರಮದ ಅಭಿನವ ಕಲ್ಮೇಶ್ವರ ಸ್ವಾಮೀಜಿ, ‘ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಬೇಕು. ಕಬ್ಬಿನ ಬಾಕಿ ಕೊಡಿಸಬೇಕು.‌ ಬೆಳೆ ಹಾನಿ ಪರಿಹಾರವನ್ನು ಕೂಡಲೇ ನೀಡಬೇಕು’ ಎಂದು ಕೋರಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಮೇಶ್ವರ ನಗರ ಘಟಕದ ಅಧ್ಯಕ್ಷ ಶಿವಪ್ಪ ಆನೆಹೊಸುರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಹೆಗಡೆ, ಚಂದ್ರಕಾಂತ ಭಜಂತ್ರಿ, ಬಾಳಯ್ಯ ಹಳ್ಳೂರ ಸ್ವಾಮೀಜಿ, ಶಿವಾಜಿ ಪಾಟೀಲ, ಪ್ರಕಾಶ ಪಾಟೀಲ, ರಮೇಶ ಮಾಳಿ, ಯಮನಪ್ಪ ಮಂಟೂರ, ಸಹದೇವ ನರಗಟ್ಟಿ, ಮಹಾದೇವ ಮಡಿವಾಳ, ಪಿ.ಎಸ್. ಮಿರ್ಜೆ, ಎನ್.ಡಿ. ಮುರಗನ್ನವರ, ವಿವೇಕ ಬಸ್ತವಾಡೆ, ಭರಮು ಕೌಜಲಗಿ, ಪ್ರಕಾಶ ಜೋಶಿ ಇದ್ದರು.

ಎನ್.ಬಿ. ಕುಸನಾಳೆ ಸ್ವಾಗತಿಸಿದರು. ಎನ್.ಎಸ್. ಬಂಡಗಾರ ನಿರೂಪಿಸಿದರು. ಎ.ಎಲ್. ಶಿರಹಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.