
ಬೆಳಗಾವಿ: ‘ಛತ್ರದ ಕಾರ್ಮಿಕರು ಮದುವೆ, ಸಭೆ ಮತ್ತು ಸಮಾರಂಭಗಳಲ್ಲಿ ಅಗೋಚರ ಕಾರ್ಮಿಕರಾಗಿ ದುಡಿಯುತ್ತಾರೆ. ಈ ಕಾರ್ಮಿಕರ ಸೇವೆ ಯಾರಿಗೂ ಕಾಣಿಸುವುದಿಲ್ಲ. ಕನಿಷ್ಠ ವೇತನ ಮತ್ತು ಭದ್ರತೆ ಇಲ್ಲ. ಈಗಲಾದರೂ ಸರ್ಕಾರ ಕನಿಷ್ಠ ಕೂಲಿ, ಆರೋಗ್ಯ ಸೇರಿದಂತೆ ಹಕ್ಕುಗಳನ್ನು ನೀಡಬೇಕು’ ಎಂದು ಛತ್ರದಲ್ಲಿ (ಚೌಲ್ಟ್ರಿ) ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸಂಘಟನೆ ನಾಯಕಿ ಸುಮನ್ ಹೇಳಿದರು.
ಆಕ್ಷನ್ ಎಡ್ ಕರ್ನಾಟಕ ಪ್ರಾಜೆಕ್ಟ್ ಮತ್ತು ಛತ್ರದಲ್ಲಿ (ಚೌಲ್ಟ್ರಿ) ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸಂಘಟನೆ ವತಿಯಿಂದ ಈಚೆಗೆ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಚೌಲ್ಟ್ರಿ ಕಾರ್ಮಿಕರ ಸಮಾಲೋಚನಾ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು.
‘ಮದುವೆ ಛತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕೆಲಸ ಮಾಡುತ್ತಿದ್ದೇವೆ. ಸ್ಥಳದಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಒಳಪಟ್ಟು ಜಾತಿ ಆಧರಿತ, ಲಿಂಗತ್ವ ಆಧಾರಿತ ಶೋಷಣೆಗಳನ್ನು ಅನುಭವಿಸುತ್ತಿದ್ದೇವೆ. ನಮಗೂ ಘನತೆಯಿದೆ. ನಮಗೂ ಸಮಾನ ವೇತನದ ಹಕ್ಕುಗಳಿವೆ. ಸರ್ಕಾರ ನಮ್ಮ ಹಕ್ಕುಗಳನ್ನು ಖಾತರಿಪಡಿಸಬೇಕು’ ಎಂದರು.
ಸ್ವರಾಜ್ ಮಹಿಳಾ ಸಂಘಟನೆಯ ಅನುಸೂಯಾ ಮಾತನಾಡಿ, ‘ಸ್ಲಂ ಮಹಿಳಾ ಸಂಘಟನೆ ಮೂಲಕ ನಾವು ಬೆಂಗಳೂರಿನ ಸ್ಲಂ ಗಳಲ್ಲಿರುವ ಅಧ್ಯಯನ ಮಾಡಿದ್ದೇವೆ. ಪುಸ್ತಕ ರೂಪದಲ್ಲಿ ಹಕ್ಕೊತ್ತಾಯಗಳ ವರದಿಯನ್ನು ಕಾರ್ಮಿಕ ಇಲಾಖೆ ಸಚಿವರ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರ್ಕಾರವು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಚೌಲ್ಟ್ರಿ ಕಾರ್ಮಿಕರನ್ನು ಗುರುತಿಸಿದೆ. ಅದು ಕಾರ್ಮಿಕರಿಗೆ ತಲುಪಿಲ್ಲ’ ಎಂದರು.
ಬೆಳಗಾವಿ ಜಿಲ್ಲೆ ವಲಯ-01 ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ ಮಾತನಾಡಿದರು. ಚೌಲ್ಟ್ರಿ ಮಹಿಳೆಯರ ಸ್ಥಿತಿಗತಿ ಮತ್ತು ಮಹಿಳಾ ಲೈಂಗಿಕ ದೌರ್ಜನ್ಯ ಕುರಿತ ಕಿರು ನಾಟಕ ಪ್ರದರ್ಶನ ನಡೆಯಿತು. ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಗೋಕಾಕ, ಮೂಡಲಗಿ ಮತ್ತು ನಿಪ್ಪಾಣಿ ತಾಲ್ಲೂಕುಗಳಿಂದ ಕಾರ್ಮಿಕರು ಆಗಮಿಸಿದ್ದರು
ವಲಯ-2 ಅಧಿಕಾರಿ ರಾಜೇಶ್ ಜಾಧವ್, ಕೀರ್ತಿ, ನಾಮದೇವ ಹಿರೇಕೊಡಿ, ಸುಕನ್ಯ, ಭಾರತಿ ತರಕಾರಿ, ಭೂಮಿಕಾ, ಪೂಜಾ ಮತ್ತು ಮಹೇಶ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಭಾರತಿ ಮಾತನಾಡಿದರು. ಪೂಜಾ ಮಾನೆ ನಿರೂಪಿಸಿ, ಮಹೇಶ ಶಿಂಗೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.