ಚಿಕ್ಕೋಡಿ: ಇಲ್ಲಿನ ಗಾಂಧಿ ಮಾರುಕಟ್ಟೆಯಲ್ಲಿ ನಾಲ್ಕೈದು ದಶಕಗಳಿಂದ ಪ್ರತಿ ಗುರುವಾರ ಸಂತೆ ನಡೆಯುತ್ತಿದೆ. ಆದರೆ, ಪುರಸಭೆ ಅಧಿಕಾರಿಗಳು ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ. ಅಶುಚಿತ್ವದಿಂದ ಕೂಡಿದ ಸ್ಥಳ ದುರ್ವಾಸನೆ ಬೀರುತ್ತಿದೆ.
ಸಂತೆ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಜನರು ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.
ಪಟ್ಟಣದ ಜನಸಂಖ್ಯೆ 40 ಸಾವಿರ ಮೀರಿದೆ. ಆದರೆ, ಇಂದಿಗೂ ಇಕ್ಕಟ್ಟಾದ ಸ್ಥಳದಲ್ಲೇ ಸಂತೆ ನಡೆಯುತ್ತಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಂತಾಗಿದೆ.
ಒಂದೆಡೆ ಗುರುವಾರ ಪೇಟೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ. ಮತ್ತೊಂದೆಡೆ ವಾರದ ಸಂತೆ ನಡೆಯುವ ಸ್ಥಳದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಎಲ್ಲೆಂದರಲ್ಲಿ ಕಲ್ಲು–ಮಣ್ಣು ಎಸೆಯಲಾಗಿದೆ.
ಇನ್ನೊಂದೆಡೆ ಸಂತೆಗೆ ತೆರಳುವ ಮಾರ್ಗದ ರಸ್ತೆಯಲ್ಲೇ ಗ್ಯಾಸ್ ಪೈಪ್ಲೈನ್ ಅಳವಡಿಕೆಗಾಗಿ ಗುಂಡಿ ತೆಗೆದು, ಎರಡು–ಮೂರು ವಾರಗಳಿಂದಲೂ ಮುಚ್ಚದೇ ಇರುವುರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಹಂದಿಗಳ ಕಾಟ: ವಾರದ ಸಂತೆ ನಡೆಯುವ ಜಾಗದಲ್ಲಿ ವ್ಯಾಪಾರಿಗಳಿಗೆ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ತ್ಯಾಜ್ಯ ಪದಾರ್ಥ ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಹಂದಿಗಳ ಕಾಟ ಮಿತಿಮೀರಿದೆ. ಮಳೆ ಬಂದರೆ ವ್ಯಾಪಾರಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಕೆಲವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಪ್ರವೇಶದ್ವಾರದ ಎದುರು ಹಾಗೂ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ.
‘ವಾರಕ್ಕೊಮ್ಮೆ ಇಲ್ಲಿ ಸಂತೆ ನಡೆದರೂ, ಕೆಲ ವ್ಯಾಪಾರಿಗಳು ಪ್ರತಿದಿನ ವ್ಯಾಪಾರ ಮಾಡುತ್ತಾರೆ. ಆದರೆ, ಪೌರ ಕಾರ್ಮಿಕರು ವಾರಕ್ಕೆ ಎರಡೇ ಸಲ ಇಲ್ಲಿಗೆ ಬಂದು ಸ್ವಚ್ಛತಾ ಕೆಲಸ ಕೈಗೊಳ್ಳುತ್ತಾರೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸ್ಥಳೀಯರಿಗೂ ತೊಂದರೆಯಾಗಿದೆ. ಸಂತೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಿದೆ’ ಎಂಬ ಆರೋಪ ಕೇಳಿಬರುತ್ತಿದೆ.
ಚಿಕ್ಕೋಡಿ ಪುರಸಭೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ವ್ಯಾಪಾರಿಗಳಿಂದ ಸಾಕಷ್ಟು ಹಣ ಪಡೆಯುತ್ತಾರೆ. ಆದರೆ ಸಂತೆ ನಡೆಯುವ ಸ್ಥಳದಲ್ಲಿ ಸೌಲಭ್ಯ ಕಲ್ಪಿಸಿಲ್ಲಹೌಸಾಬಾಯಿ ದಾನನ್ನವರ ಗ್ರಾಹಕರು ಉಮರಾಣಿ
ಈ ಸಂತೆಗೆ ಸುತ್ತಲಿನ 20 ಗ್ರಾಮಗಳಿಂದ ಜನರು ಬರುತ್ತಾರೆ. ಆದರೆ ಕನಿಷ್ಠ ಮೂಲಸೌಕರ್ಯ ದೊರಕದೆ ತೊಂದರೆ ಅನುಭವಿಸುತ್ತಿದ್ದಾರೆಸುವರ್ಣಾ ಚಿಕ್ಕಲಕಿ ಗ್ರಾಹಕರು ಚಿಕ್ಕೋಡಿ
ಸಂತೆಗೆ ಬರುವವರ ವಾಹನಗಳ ನಿಲುಗಡೆಗಾಗಿ ಸೂಕ್ತ ವ್ಯವಸ್ಥೆ ಮಾಡಬೇಕುಮೋಹಿತ ಢಾಕೆ ವ್ಯಾಪಾರಿ ಚಿಕ್ಕೋಡಿ
ಸಂತೆ ನಡೆಯುವ ಸ್ಥಳದಲ್ಲಿ ಸಾಮೂಹಿಕ ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಜನರ ಗೋಳು ಹೇಳತೀರದಾಗಿದೆ. ತಕ್ಷಣವೇ ಶೌಚಗೃಹ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕುಶಾನವಾಜ್ ಬಾಗವಾನ್ ಅಧ್ಯಕ್ಷ ಬೀದಿಬದಿ ವ್ಯಾಪಾರಸ್ಥರ ಸಂಘ ಚಿಕ್ಕೋಡಿ
ಸಂತೆಯ ಸ್ಥಳದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದುಚಿದಂಬರ ಕುಲಕರ್ಣಿ ತಹಶೀಲ್ದಾರ್ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.