ಬೆಳಗಾವಿ: ‘ಗ್ರಾಮ ಪಂಚಾಯಿತಿಗಳ ಬಲವರ್ಧನೆಗಾಗಿ ನಾನು ಯಾವುದೇ ಪಕ್ಷ ಸೇರದೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನನ್ನು ಆಯ್ಕೆ ಮಾಡಬೇಕು’ ಎಂದು ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಕೋರಿದರು.
ಜಿಲ್ಲೆಯ ಅಥಣಿ ಹೊರವಲಯದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಅಥಣಿ ಭಾಗದೊಂದಿಗೆ ನಿರಂತರ ಸಂಪರ್ಕವಿದೆ. ಎಲ್ಲ ಸಮಾಜವರೊಂದಿಗೆ ಸಹೋದರತ್ವ ಭಾವನೆಯಿಂದ ನಡೆದುಕೊಳ್ಳುತ್ತಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಅಥಣಿ ತಾಲ್ಲೂಕಿನ ಜನರ ಪ್ರೀತಿ–ವಿಶ್ವಾಸಕ್ಕೆ ಎಂದಿಗೂ ಚ್ಯುತಿ ತರುವುದಿಲ್ಲ’ ಎಂದರು.
‘ಯಾವುದೇ ಪಕ್ಷ ಸೇರಿದರೆ ಅಲ್ಲಿನ ತತ್ವ– ಸಿದ್ಧಾಂತಗಳನ್ನು ಒಪ್ಪಿಕೊಂಡು ಕೆಲಸ ಮಾಡಬೇಕಾಗುತ್ತದೆ. ಅದು ನನಗೆ ಬೇಡ’ ಎಂದು ಹೇಳಿದರು.
ಉದ್ಯಮಿ ಉತ್ತಮ ಪಾಟೀಲ, ಮುಖಂಡರಾದ ಸುರೇಶ ಮಾಯನ್ನವರ, ಸಿದ್ದಪ್ಪ ಮುದಕನ್ನವರ, ಮುಖಂಡರಾದ ನಿಂಗಪ್ಪ ನಂದೇಶ್ವರ, ರಾವಸಾಬ ಬೇವನೂರ, ಅಮೂಲ ನಾಯ್ಕ, ಎ.ಸಿ. ಪಾಟೀಲ, ರಾಮಗೌಡ ಗುಮತಾಜ್, ಬಸು ಯಡೂರ, ರಮೇಶ ಪಾಟೀಲ, ರವೀಂದ್ರ ಕಡಕೋಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.