ಬೆಂಗಳೂರು: ‘ಡಿ.ಜೆ. ಹಳ್ಳಿ ಗಲಭೆ ನಂತರ ಕಾಂಗ್ರೆಸ್ ತನ್ನ ನಿಜ ಬಣ್ಣ ಬಯಲು ಮಾಡಿಕೊಂಡಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಟೀಕಿಸಿದ್ದಾರೆ.
‘ತಮ್ಮ ಪಕ್ಷದ ದಲಿತ ನಾಯಕನಿಗೆ ರಕ್ಷಣೆ ನೀಡಲಾಗದ ಕಾಂಗ್ರೆಸ್ ನಾಯಕರು, ಘಟನೆಗೆ ಕಾರಣನಾದ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡಿದರು’ ಎಂದು ಹೇಳಿದ್ದಾರೆ.
‘ಇವರ ಮಿಥ್ಯಾರೋಪಗಳ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಪ್ರಶ್ನಿಸಿದಾಗ, ನಾಯಕತ್ವದ ದಿವಾಳಿತನ ಪ್ರದರ್ಶಿಸಿದ ಕಾಂಗ್ರೆಸ್, ಶಾಸಕ ಜಮೀರ್ ಅಹಮ್ಮದ್ ಮೂಲಕ ಉತ್ತರ ಕೊಡಿಸಲು ಹೊರಟಿದೆ’ ಎಂದಿದ್ದಾರೆ.
‘ಸಿದ್ಧಾಂತ ಬದ್ಧ, ನೀತಿ ರಾಜಕಾರಣ ಮಾಡುವ ಸಂತೋಷ್ ಜೀ ಬಗ್ಗೆ ಮಾತನಾಡಿ ಕಾಂಗ್ರೆಸ್ ತನ್ನಲ್ಲಿನ ನಾಯಕತ್ವದ ಕೊರತೆ ಮಾತ್ರವಲ್ಲ, ನೈತಿಕತೆಯ ಕೊರತೆಯನ್ನು ಜಗತ್ತಿಗೆ ಪರಿಚಯಿಸುತ್ತಿದೆ. ದೇಶದಲ್ಲಿಕಾಂಗ್ರೆಸ್ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಛೇಡಿಸಿದ್ದಾರೆ.
‘ಅಧಿಕಾರದಲ್ಲಿದ್ದಾಗ ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುವಂತೆ ಪ್ರೋತ್ಸಾಹ ನೀಡಿ, ಈಗ ಪೊಲೀಸರ ಮೇಲೆ ಕರ್ತವ್ಯ ಲೋಪದ ಆರೋಪ ಹೊರಿಸುತ್ತಿರುವ ಕಾಂಗ್ರೆಸಿಗರಿಗೆ ಆತ್ಮಸಾಕ್ಷಿಯೇ ಇಲ್ಲ’ ಎಂದು ಟ್ವೀಟ್ ಕೂಡ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.