ADVERTISEMENT

ಥೂ ಅಂತಾರಲ್ಲಾ, ನಾನೇನು ಮಾಡಿದ್ದೇನೆ?: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 9:34 IST
Last Updated 27 ನವೆಂಬರ್ 2021, 9:34 IST
ರಮೇಶ ಜಾರಕಿಹೊಳಿ(ಎಡ), ಲಕ್ಷ್ಮಿ ಹೆಬ್ಬಾಳಕರ(ಬಲ)
ರಮೇಶ ಜಾರಕಿಹೊಳಿ(ಎಡ), ಲಕ್ಷ್ಮಿ ಹೆಬ್ಬಾಳಕರ(ಬಲ)   

ಬೆಳಗಾವಿ: ‘ಪಕ್ಷದ ವರಿಷ್ಠರು ಆಶೀರ್ವಾದ ಮಾಡಿದ್ದರಿಂದ ತಮ್ಮ ಚನ್ನರಾಜ ಹಟ್ಟಿಹೊಳಿ ವಿಧಾನಪರಿಷತ್‌ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾನೆ. ಬಿಜೆಪಿಯವರೂ ಅಭ್ಯರ್ಥಿ ಹಾಕಿದ್ದಾರೆ. ಹೀಗಿರುವಾಗ, 3ನೇಯವರಿಗೆ ಏನು ಕೆಲಸ? ಹೋದ ಬಾರಿ ನಮ್ಮ ಪಕ್ಷದಲ್ಲೇ ಇದ್ದು ನಮ್ಮವರನ್ನೇ ಸೋಲಿಸಿ ಅನ್ಯಾಯ ಮಾಡಿದರು. ಈ ಬಾರಿ ಬಿಜೆಪಿಗೆ ಹೋಗಿ ಅವರಿಗೂ ಅನ್ಯಾಯ ಮಾಡುತ್ತಿದ್ದಾರೆ’ ಎಂದುಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ಬೈಲಹೊಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಲಕ್ಷ್ಮಿ ಸೋಲಿಸಬೇಕು ಎನ್ನುವುದೇ ಗುರಿಯಂತೆ. ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಬಹುದು; ನಾನು ನನ್ನ ಪಕ್ಷದಲ್ಲೂ ಬೆಳೆಯಬಾರದಾ? ಲಿಂಗಾಯತ ಸಮಾಜದ ಹೆಣ್ಣು ಮಗಳು ನಾನು. ಥೂ ಅಂತಾರಲ್ಲ?! ನಾನೇನು ಮಾಡಿದ್ದೇನೆ?! ಬಸವಣ್ಣನ ತತ್ವದ ಮೇಲೆ ಜೀವನ ನಡೆಸುತ್ತಿರುವ ಹೆಣ್ಣು ಮಗಳೊಬ್ಬಳ ಬಗ್ಗೆ ಮಾತನಾಡಿ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಸದಸ್ಯರಿಗಾಗಿ ಗಾಡಿಗಳನ್ನು ಕಳುಹಿಸ್ತಾರಂತೆ. ಚುನಾವಣೆ ಮುಗಿದ ಮೇಲೂ ಆ ಗಾಡಿಗಳು ಇರುತ್ತವೆಯೇ? ಆ ಇಬ್ಬರು ಇಲ್ಲೇ ಇರುತ್ತಾರಾ? ಜಿಲ್ಲಾ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಜನರು ವಿಚಾರ ಮಾಡಬೇಕು. ಜಾರಕಿಹೊಳಿ ಕುಟುಂಬದ ಮಾಸ್ಟರ್‌ ಮೈಂಡ್ ಆಗಿರುವ ಸತೀಶ ಜಾರಕಿಹೊಳಿ ನಮ್ಮ ಜೊತೆಗಿದ್ದಾರೆ. ಇಲ್ಲಿರುವವರು ನಾವು. ನಿಮಗೆ ನೆರವಾಗುವವರು ನಾವು’ ಎಂದರು.

ADVERTISEMENT

‘ಬಂದವರೆಲ್ಲಾ ಮತ ಹಾಕುತ್ತೀರೋ ಇಲ್ಲವೋ? ಆದರೆ, ಸ್ವಾಭಿಮಾನ ಮಾರಿಕೊಳ್ಳಬೇಡಿ. ಮುಂದೆ ಮಂತ್ರಿಯಾಗ್ತಾರೆ ನೋಡ್ಕೊಳ್ತೀವಿ ಎಂದು ಬೆದರಿಸುತ್ತಿದ್ದಾರಂತೆ. ತಾಯಿ ರಾಣಿ ಚನ್ಮಮ್ಮ, ತಂದೆ ಸಂಗೊಳ್ಳಿರಾಯಣ್ಣ, ಪುನೀತ್‌ ರಾಜ್‌ಕುಮಾರ್ ಅಂಥವರೇ ಬದುಕಲಿಲ್ಲ. ಇನ್ನು ನಾವೆಲ್ಲರೂ ಯಾವ ಲೆಕ್ಕ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.