ADVERTISEMENT

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಲಕ್ಷ್ಮಣ ಸವದಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:31 IST
Last Updated 31 ಅಕ್ಟೋಬರ್ 2020, 12:31 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ನಾಯಿ ಬೊಗಳಿಕೊಂಡು ಹೋಗುತ್ತಿದೆ ಎಂದು ನಾವೇಕೆ ಸುಮ್ಮನೆ ಬೆನ್ನು ಹತ್ತಬೇಕು?, ತಲೆಕೆಡಿಸಿಕೊಳ್ಳಬೇಕು?’.

ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮತ್ತು ಇಲ್ಲಿನ ಎಂಇಎಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಂಬಲಿಸಿ ನ.1ರಂದು ತಮ್ಮ ರಾಜ್ಯದಲ್ಲಿ ಕರಾಳ ದಿನಾಚರಣೆ ನಡೆಸುವುದಾಗಿ ಮಹಾರಾಷ್ಟ್ರ ಸಚಿವರು ನೀಡಿರುವ ಹೇಳಿಕೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಶನಿವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಯಾವುದೋ ನಾಯಕರು ಏನು ಹೇಳಿದರು ಎನ್ನುವುದರ ಬಗ್ಗೆ ನಮಗೆ ಚಿಂತೆ ಇಲ್ಲ. ಆ ಬಗ್ಗೆ ಟೀಕೆ–ಟಿಪ್ಪಣಿ ಮಾಡುವುದಿಲ್ಲ. ಆದರೆ, ಬೆಳಗಾವಿ ಅಖಂಡ ಕರ್ನಾಟಕದ ಅವಿಭಾಜ್ಯ ಅಂಗ. ಅಲ್ಲಿನವರು ಯಾರೇ ಕೂಗಾಡಿದರೂ, ಹಾರಾಡಿದರೂ ಅವರ ಹೇಳಿಕೆ ಆ ರಾಜ್ಯಕ್ಕೆ ಸೀಮಿತವಾಗಿರುತ್ತದೆ. ನಮ್ಮ ರಾಜ್ಯಕ್ಕೆ ಸಂಬಂಧಿಸುವುದಿಲ್ಲ. ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟದಲ್ಲಿರುತ್ತದೆ. ಅದಕ್ಕಾಗಿಯೇ ಇಲ್ಲಿ ಸುವರ್ಣ ವಿಧಾನಸೌಧ ಕಟ್ಟಿರುವುದು ಮತ್ತು ವರ್ಷದಲ್ಲಿ ಒಮ್ಮೆ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನಿಸಿರುವುದು’ ಎಂದು ಹೇಳಿದರು.

ADVERTISEMENT

‘ಬೆಳಗಾವಿ ಎಂದಿಗೂ ನಮ್ಮದು. ಮಹಾರಾಷ್ಟ್ರದವರು ಏನೇ ಹೇಳಿದರೂ ಅವರ ತೀಟೆ ತೀರಿಸಿಕೊಳ್ಳಲು ಹೇಳುವಂಥದ್ದು. ಕೆಲವು ಸಂಘಟನೆಗಳ ಅಸ್ತಿತ್ವ ಕಾಪಾಡಿಕೊಳ್ಳಲು ಹಾಗೂ ರಾಜಕಾರಣಕ್ಕೋಸ್ಕರ ಮಾಡುತ್ತಿದ್ದಾರೆ. ಇದು ಜನರಿಗೂ ಗೊತ್ತಿದೆ. ಕರ್ನಾಟಕ ಅನ್ನ ತಿನ್ನುತ್ತಾರೆ. ನೀರು ಕುಡಿಯುತ್ತಿದ್ದಾರೆ. ನೆಲದಲ್ಲಿದ್ದಾರೆ. ಆದರೂ ಆ ಸಂಘಟನೆಗಳವರು ಮಾತನಾಡುತ್ತಿರುತ್ತಾರೆ’ ಎಂದರು.

‘ಯಾರೇ ಆಗಲಿ, ಕಾನೂನು ಚೌಕಟ್ಟನ್ನು ಮೀರಿ ಹೇಳಿಕೆ ಕೊಟ್ಟರೆ, ಅದಕ್ಕೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ಮಂತ್ರಿ ಇರಲಿ, ಯಾರಿರಲಿ ಮಹಾರಾಷ್ಟ್ರದಲ್ಲಿ ಹೇಳಿದವರು ಬೆಳಗಾವಿಯಲ್ಲಿ ಬಂದು ಹೇಳಲಿ ಅದಕ್ಕೆ ತಕ್ಕೆ ಉತ್ತರ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ಸರ್ಕಾರವಿದ್ದರೂ ತಮ್ಮ ನಿಲುವನ್ನು ಪ್ರಕಟಿಸುತ್ತವೆ. ಆ ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಮಾತನಾಡುತ್ತಾರೆ. ನಮಗೆ ಧಕ್ಕೆ ಆಗಲಾರದ ಕೆಲಸಕ್ಕೆ ಹೇಳಿಕೆ ಕೊಟ್ಟಾಗ ನಾವೇಕೆ ತಲೆಕೆಡಿಸಿಕೊಳ್ಳಬೇಕು?’ ಎಂದರು.

‘ಮಹಾರಾಷ್ಟ್ರದ ಸಚಿವರ ಹೇಳಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುವುದಿಲ್ಲ; ಏನೂ ಸಮಸ್ಯೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.