ಬೆಳಗಾವಿ: ‘ಸಂವಿಧಾನ ಎಲ್ಲರಿಗೂ ಸಮಾನ ನ್ಯಾಯ ಒದಗಿಸಿದೆ. ನಾವೆಲ್ಲರೂ ಅದರಿಂದ ಲಾಭ ಪಡೆದು ಪ್ರಗತಿ ಸಾಧಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ.ಸಿ. ನಾಗಣ್ಣ ಹೇಳಿದರು.
ಇಲ್ಲಿನ ಭಾವುರಾವ ಕಾಕತಕರ ಕಾಲೇಜಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಶಮಾನೋತ್ಸವ ಸಂಭ್ರಮ ಅಂಗವಾಗಿ ಬುಧವಾರ ನಡೆದ ವಿಸ್ತರಣಾ ಉಪನ್ಯಾಸ ಮಾಲಿಕೆ ಮತ್ತು ‘ಇಂಗ್ಲಿಷ್ ವಿಭಾಗದ ಕನ್ನಡ ಕವನಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅನಕ್ಷರತೆ ದೇಶಕ್ಕೆ ಅಂಟಿದ ಶಾಪವಾಗಿದೆ. ಅದನ್ನು ಹೋಗಲಾಡಿಸಲು ಪ್ರತಿ ವಿದ್ಯಾರ್ಥಿ ಕನಿಷ್ಠ ಐವರನ್ನು ಸಾಕ್ಷರರನ್ನಾಗಿಸಬೇಕು. ಅಧ್ಯಾಪಕರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕು. ಅವರಲ್ಲಿ ವೈಚಾರಿಕ ಮನೋಭಾವ ಬಿತ್ತಬೇಕು. ದೇಶವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಲುಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆಲಸಗಳು ತೀವ್ರಗೊಳ್ಳಬೇಕು’ ಎಂದರು.
‘ಶಿಕ್ಷಣ ಸ್ವಾವಲಂಬಿಯಾಗಿಸುತ್ತದೆ. ಶಿಕ್ಷಣದ ಮೂಲ ಆಶಯಗಳು ಸಾಕಾರವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಕವಿತಾ ಕುಸುಗಲ್ಲ ಇದ್ದರು.
ನಾಟಕಕಾರ ಡಿ.ಎಸ್. ಚೌಗಲೆ ಸ್ವಾಗತಿಸಿದರು. ಆರ್ಸಿಯು ಪ್ರಸಾರಾಂಗ ವಿಭಾಗದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.