
ರಾಯಬಾಗ: ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವಂತಿ ಅಗ್ಗಿಮಠ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ರಾಯಬಾಗ ತಾಲ್ಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕ ಶ್ರೀನಾಥ ಶಿರಗೂರ ಮಾತನಾಡಿ, ‘ಆತ್ಮಹತ್ಯೆಗೆ ಕಾರಣರಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ನಿಂಗಪ್ಪ ಬೀರಣಗಡ್ಡಿ, ‘ತಾಲ್ಲೂಕಿನಲ್ಲಿರುವ ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ವೇತನ ಮತ್ತು ಪತ್ರಿಕೆಗಳ ಬಾಕಿ ಬಿಲ್ ಪಾವತಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಗ್ರಂಥಾಲಯ ಮೇಲ್ವಿಚಾಚಾರಕರು ಧೃತಿಗೆಡಬಾರದು’ ಎಂದರು.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಾದ ಬಿ.ವಿ ಮಸಲಾಜಿ, ಸಂಘದ ತಾಲ್ಲುಕು ಅಧ್ಯಕ್ಷ ಸಿದ್ದರಾಯ ಬಸಲಿಗುಂದಿ, ಕಾರ್ಯದರ್ಶಿ ವಿಠಲ ಮಾದರ ಗ್ರಂಥಾಲಯ ಮೇಲ್ವಿಚಾರಕರಾದ ಪರಪ್ಪ ಭಾನಿ, ಭರತೇಶ ಗಣೇಶವಾಡಿ, ದುಂಡಪ್ಪ ಮ್ಯಾಗಡಿ, ರಾಜು ಖೋತ, ಮಲ್ಲಪ್ಪ ಕುಳಲಿ, ದತ್ತಾತ್ರೇಯ ಪಾಟೀಲ, ಶೋಭಾ ಪತ್ತಾರ, ಸುಧಾಕರ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.