ರಾಮದುರ್ಗ: ಆರ್ಥಿಕ ಸಾಕ್ಷರತೆ ಹೊಂದಿದರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಹಿಳೆಯರಿಗಾಗಿ ದೇಶದಾದ್ಯಂತ ಆರ್ಥಿಕ ಸಾಕ್ಷರತೆ ಸಪ್ತಾಹ ಹಮ್ಮಿಕೊಂಡು ಆರ್ಥಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬೆಳಗಾವಿಯ ಪ್ರಶಾಂತ ಘೋಡಕೆ ಹೇಳಿದರು.
ಸ್ಥಳೀಯ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ರಿಸರ್ವ್ಬ್ಯಾಂಕ್ ಹಾಗೂ ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಹಯೋಗದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡ ಆರ್ಥಿಕ ಸಪ್ತಾಹ-2025 ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕಿನ ವಿಷಯದ ಬಗ್ಗೆ ಕರೆ ಮೂಲಕ, ಮೆಸೇಜ್ ಮೂಲಕ ಇನ್ನಾವುದೇ ತಂತ್ರದ ಮೂಲಕ ಅಪರಿಚತ ವ್ಯಕ್ತಿಗಳು ಮಾಹಿತಿ ಕೇಳಿದರೆ ಮಾಹಿತಿ ಕೊಡಬಾರದು. ಒಂದು ವೇಳೆ ಮಾಹಿತಿ ಕೊಟ್ಟರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಐನಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಗೆ ಸಾಮಾಜಿಕ ಭದ್ರತೆಯ ವಿಮಾ ಯೋಜನೆಗಳನ್ನು ಮಾಡಿಸಲಾಗುತ್ತಿದೆ. ಸಾಮಾಜಿಕ ಭದ್ರತೆಯ ವಿಮಾ ಯೋಜನೆಗಳು ಜನರಿಗೆ ಬಹಳಷ್ಟು ಅನುಕೂಲವಾಗಿವೆ. ಬ್ಯಾಂಕಿನ ಖಾತೆ ಹೊಂದಿರುವ ಎಲ್ಲರೂ ಈ ವಿಮೆ ಮಾಡಿಸಬೇಕೆಂದು ಕರೆ ನೀಡಿದರು.
ಕೆನರಾ ಬ್ಯಾಂಕಿನ ಹಿರಿಯ ಪ್ರಬಂಧಕ ಅಜಿತ್ ರಾಜನ್ನವರ ಮಾತನಾಡಿ, ಕೇಂದ್ರ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರದ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ, ಪುರಸಭೆಯ ಡೇ-ನೆಲ್ಮ್ ಯೋಜನಾಧಿಕಾರಿ ಗೀತಾ ಬೆಳಗಲಿ, ನೀಲಮ್ಮ ಹಿರೇಮಠ, ಅಕ್ಷತಾ ಹಲ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.