ರಾಮದುರ್ಗ (ಬೆಳಗಾವಿ ಜಿಲ್ಲೆ): ಲಾಕ್ಡೌನ್ ಪರಿಣಾಮ ಕ್ಯಾಪ್ಸಿಕಂ ಅನ್ನು ಮಾರುಕಟ್ಟೆಗೆ ಸಾಗಿಸಲಾಗದೆ ತಾಲ್ಲೂಕಿನ ಸಾಲಹಳ್ಳಿ ಗ್ರಾಮದ ರೈತ ಮಹೇಶ ಬಸಪ್ಪ ಉಜ್ಜಿನಕೊಪ್ಪ ನಷ್ಟ ಅನುಭವಿಸಿದ್ದಾರೆ.
ಒಂದು ಎಕರೆಯಲ್ಲಿ ಭರ್ಜರಿಯಾಗಿ ಬಂದಿದ್ದ ಕ್ಯಾಪ್ಸಿಕಂ ಸಂಪೂರ್ಣ ಹಾಳಾಗುವ ಸ್ಥಿತಿ ತಲುಪಿದ್ದು, ಬೆಳೆದವರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಅವರು ಎಕರೆಯಲ್ಲಿ ಅರ್ಧ ಎಕರೆಗೆ ಒಂದರಂತೆ 2 ಪಾಲಿಹೌಸ್ ನಿರ್ಮಿಸಿ ಕ್ಯಾಪ್ಸಿಕಂ ಬೆಳೆದಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಉತ್ತಮ ಉಳುವರಿಗಾಗಿ ಶ್ರಮಿಸಿದ್ದರು. ಆದರೆ ಲಾಕ್ಡೌನ್ನಿಂದ ಬೆಳಗಾವಿ, ಗೋವಾ ಹಾಗೂ ಪುಣೆ ಮಾರುಕಟ್ಟೆಗಳಿಗೆ ತಲುಪಿಸಲು ಆಗಿಲ್ಲ. ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಕ್ಯಾಪ್ಸಿಕಂ ಮಾರಾಟವಾಗದೆ ಹೊಲದಲ್ಲಿ ಉಳಿದುಕೊಂಡಿದೆ. ಇತರ ಕಡೆಗಳಲ್ಲೂ ಮಾರುಕಟ್ಟೆ ಸಿಗದ ಕಾರಣ ₹ 8 ಲಕ್ಷದಿಂದ ₹ 10 ಲಕ್ಷದವರೆಗೆ ಹಾನಿ ಆಗಿದೆ ಎಂದು ರೈತ ತಿಳಿಸಿದರು. ಕ್ಯಾಪ್ಸಿಕಂ ಅನ್ನು ಹೆಚ್ಚಾಗಿ ಫಿಜ್ಜಾ, ಬರ್ಗರ್ಗೆ ಬಳಸಲಾಗುತ್ತದೆ.
ಅವರು ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಪಡೆದು ₹ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಪಾಲಿಹೌಸ್ ಕೂಡ ಸದ್ಯ ನಿರುಪಯುಕ್ತವಾಗಿದೆ. ನಿರ್ಮಾಣಕ್ಕೆ ಒಟ್ಟು ₹ 40 ಲಕ್ಷ ಖರ್ಚು ಮಾಡಿದ್ದಾರೆ. ಹೀಗಾಗಿ, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಕೋರುತ್ತಿದ್ದಾರೆ.
‘ಕ್ಯಾಪ್ಸಿಕಂ ತಲಾ 100ರಿಂದ 150 ಗ್ರಾಂ. ತೂಗುತ್ತದೆ. ಇದೇ ಇಳುವರಿ ಕೂಡ ಕಳೆದ ಸಾರಿಯೂ ಬಂದಿತ್ತು. ಆಗ ₹ 3ಲಕ್ಷ ಲಾಭ ಆಗಿತ್ತು. ಆದರೆ ಈ ಬಾರಿ ₹50ಸಾವಿರವೂ ಕೈಗೆ ಸೇರಲಿಲ್ಲ’ ಎಂದು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.
‘ಸಾಲಹಳ್ಳಿಯ ರೈತ ಸಾಕಷ್ಟು ಶ್ರಮ ವಹಿಸಿ ಉತ್ತಮ ಬೆಳೆ ಬೆಳೆದಿದ್ದಾರೆ. ಸಾಗಿಸಲು ಸಾಧ್ಯವಾಗದೆ ಕಷ್ಟವಾಗಿದೆ. ಬೆಳಗಾವಿಗೆ ಸಾಗಿಸಿದರೂ ಖರೀದಿಸುವವರು ಇಲ್ಲವಾಗಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಮುಧೋಳ ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.