ಆನಂದ ಸುತಾರ್, ರೇಷ್ಮಾ ತಿರವೀರ
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ರಾತ್ರಿ, ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೀಡಿ ನಿವಾಸಿಗಳಾದ ಆನಂದ ಸುತಾರ್ (35) ಹಾಗೂ ರೇಷ್ಮಾ ತಿರವೀರ (29) ಮೃತಪಟ್ಟವರು. ಆನಂದಗೆ ಮೂರು ಮಕ್ಕಳಿದ್ದು, ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ರೇಷ್ಮಾ ಅವರಿಗೂ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
‘ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಈ ವಿಷಯ ರೇಷ್ಮಾ ಅವರ ಪತಿಗೆ ಗೊತ್ತಾಗಿದ್ದರಿಂದ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು. ಆರೋಪಿ ಆನಂದ ಮೇಲೆ ಕ್ರಮ ಕೈಗೊಳ್ಳುವಂತೆ ರೇಷ್ಮಾ ಅವರ ಪತಿ ನಂದಗಡ ಠಾಣೆಗೆ ದೂರು ಕೂಡ ನೀಡಿದ್ದರು. ಆ.11ರಂದು ಆರೋಪಿಯನ್ನು ಠಾಣೆಗೆ ಕರೆಸಿ ತಾಕೀತು ಮಾಡಿ ಕಳಿಸಲಾಗಿತ್ತು. ಇದರಿಂದ ರೇಷ್ಮಾ ಮಾತನಾಡುವುದನ್ನು ನಿಲ್ಲಿಸಿದ್ದರು.’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ 12.30ರ ಸುಮಾರಿಗೆ ಹಿತ್ತಲ ಬಾಗಿಲಿನಿಂದ ರೇಷ್ಮಾ ಅವರ ಮನೆಗೆ ಬಂದ ಆನಂದ, ಚಾಕುವಿನಿಂದ ಒಂಬತ್ತು ಬಾರಿ ಚುಚ್ಚಿ, ತಾನೂ ಚುಚ್ಚಿಕೊಂಡ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಪ್ರಾಣ ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.