ಬೆಳಗಾವಿ: ‘ಇಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್ಇ) ಸೊಸೈಟಿಯ ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.
‘ಇಬ್ಬರು ಉಪಾಧ್ಯಕ್ಷರು ಮತ್ತು 12 ಆಡಳಿತ ಮಂಡಳಿ ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ 3ನೇ ಬಾರಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿವೆ. ಮುಂದಿನ ಐದು ವರ್ಷಗಳವರೆಗೆ ಇವರೆಲ್ಲರ ಅಧಿಕಾರದ ಅವಧಿ ಇರುತ್ತದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಉಪಾಧ್ಯಕ್ಷರಾಗಿ ರಾಜೇಂದ್ರ ಹಂಜಿ, ಬಸವರಾಜ ತಟವಟಿ, ಆಡಳಿತ ಮಂಡಳಿ ಸದಸ್ಯರಾಗಿ ಪ್ರಭಾಕರ ಕೋರೆ, ಪ್ರವೀಣ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಶ್ರೀಶೈಲಪ್ಪ ಮೆಟಗುಡ್, ಜಯಾನಂದ ಮುನವಳ್ಳಿ, ಶಂಕರಣ್ಣ ಮುನವಳ್ಳಿ, ಬಸವರಾಜ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಯಲ್ಲನಗೌಡ ಪಾಟೀಲ, ಅನಿಲ ಪಟ್ಟೇದ ಹಾಗೂ ಡಾ.ವಿರೂಪಾಕ್ಷಿ ಸಾಧುನವರ ಆಯ್ಕೆಯಾಗಿದ್ದಾರೆ. ಹೀಗಾಗಿ, ಫೆ. 29ರಂದು ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ತಾಂತ್ರಿಕ ಕಾಲೇಜು ಮತ್ತು ಮಾರ್ಚ್ 1ರಂದು ಬೆಳಗಾವಿಯ ಲಿಂಗರಾಜ ಕಾಲೇಜು ಆವರಣದಲ್ಲಿ ನಿಗದಿಯಾಗಿದ್ದ ಮತದಾನವನ್ನು ರದ್ದುಪಡಿಸಲಾಗಿದೆ. ಮಾರ್ಚ್ 1ರಂದು ಸರ್ವ ಸದಸ್ಯರ ಸಭೆಯ ಬಳಿಕ ನೂತನ ಕಾರ್ಯಾಧ್ಯಕ್ಷರನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.
ಈವರೆಗೆ ಮಹಾಂತೇಶ ಅವರ ತಂದೆ, ಮಾಜಿ ಸಚಿವ ಶಿವಾನಂದ ಕೌಜಲಗಿ ಅಧ್ಯಕ್ಷರಾಗಿದ್ದರು. ಅದಕ್ಕಿಂತಲೂ ಹಿಂದೆ ಅವರ ತಾತ ಎಚ್.ವಿ. ಕೌಜಲಗಿ ಈ ಸ್ಥಾನದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.