ADVERTISEMENT

ಬೆಳಗಾವಿ: ಪುಣ್ಯ ಸ್ನಾನ, ಪರಿಸರ ಭೋಜನಕ್ಕೆ ಸಿದ್ಧತೆ

ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಸಂಭ್ರಮಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:34 IST
Last Updated 13 ಜನವರಿ 2021, 13:34 IST
ಸಂಕ್ರಾಂತಿ ಹಬ್ಬದ ಮುನ್ನಾ ದಿನವಾದ ಬುಧವಾರ ಬೆಳಗಾವಿಯ ಮಾರುಕಟ್ಟೆಯಲ್ಲಿ ಎಳ್ಳು–ಬೆಲ್ಲ ಮೊದಲಾದ ಸಾಮಗ್ರಿ ಖರೀದಿಸಿದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಸಂಕ್ರಾಂತಿ ಹಬ್ಬದ ಮುನ್ನಾ ದಿನವಾದ ಬುಧವಾರ ಬೆಳಗಾವಿಯ ಮಾರುಕಟ್ಟೆಯಲ್ಲಿ ಎಳ್ಳು–ಬೆಲ್ಲ ಮೊದಲಾದ ಸಾಮಗ್ರಿ ಖರೀದಿಸಿದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರುಸಿದ್ಧತೆ ಮಾಡಿಕೊಂಡಿದ್ದಾರೆ.

ಹಬ್ಬದ ಮುನ್ನಾ ದಿನವಾದ ಬುಧವಾರ ಹಣ್ಣು, ಹೂವು, ಪೂಜಾ ಸಾಮಗ್ರಿಗಳು ಮೊದಲಾದ ಅಗತ್ಯ ವಸ್ತುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿ ನಡೆಯಿತು. ಕ್ಯಾಲೆಂಡರ್ ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಎಳ್ಳು, ಬೆಲ್ಲ ಹಂಚಿ ಸ್ನೇಹ ಬೆಸೆಯುವ ಆಚರಣೆಗಾಗಿ, ಎಳ್ಳು, ಶೇಂಗಾ, ಬೆಲ್ಲ ಮೊದಲಾದ ಅಗತ್ಯ ಸಾಮಗ್ರಿಗಳ ಬೆಲೆ ಗಗಮನಕ್ಕೇರಿದೆ.

ಕುಟುಂಬದವರು, ಸ್ನೇಹಿತರು, ಬಂಧುಗಳು ಸೇರಿ ನದಿ, ಹೊಳೆಗಳ ದಂಡೆಗಳಲ್ಲಿ ಊಟ ಸೇವಿಸಿ ಸಂಭ್ರಮವನ್ನು ಹಂಚಿಕೊಳ್ಳುವುದು ಈ ಹಬ್ಬದ ವಿಶೇಷ. ಸುಗ್ಗಿ ಹಬ್ಬವನ್ನು ಅರ್ಥಪೂರ್ಣ ಹಾಗೂ ಆರೋಗ್ಯಕರ ಶೈಲಿಯಲ್ಲಿ ಆಚರಿಸುವುದು ಇಲ್ಲಿನ ಸಂಪ್ರದಾಯ.

ADVERTISEMENT

ವಿವಿಧ ಬಗೆಯ ತಿನಿಸುಗಳನ್ನು ಮಾಡಿಕೊಂಡು ಕುಟುಂಬದವರು, ಬಂಧು–ಮಿತ್ರರೊಂದಿಗೆ ನದಿಗಳು ಅಥವಾ ಹೊಳೆಗಳ ಬಳಿಗೆ ತೆರಳುತ್ತಾರೆ. ಅಲ್ಲಿ ಪುಣ್ಯಸ್ನಾನ ಮಾಡಿ ದೇವರಿಗೆ ನಮಿಸುತ್ತಾರೆ. ಬಳಿಕ ಎಲ್ಲರೂ ಸೇರಿ ಊಟ ಮಾಡಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ವಾಪಸಾಗುತ್ತಾರೆ. ಅಂದು ವಿವಿಧ ಕಡೆಗಳಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವಗಳು ಕೂಡ ನೆರವೇರುವುದು ವಾಡಿಕೆ. ಆದರೆ, ಈ ಬಾರಿ ಕೋವಿಡ್–19 ಭೀತಿ ಇರುವುದರಿಂದಾಗಿ ಹಲವು ಕಡೆಗಳಲ್ಲಿ ಜಾತ್ರೆ, ರಥೋತ್ಸವ ರದ್ದುಪಡಿಸಲಾಗಿದೆ.

ಎಂ.ಕೆ. ಹುಬ್ಬಳ್ಳಿ ಸಮೀಪದ ಶರಣೆ ಗಂಗಾಬಿಕಾ ಐಕ್ಯಮಂಟಪದ ಬಳಿ ಸೇರಿದಂತೆ ಹಲವೆಡೆ ಜಾತ್ರೆ ನಡೆಯುತ್ತಿಲ್ಲ. ಆದರೆ, ಜನರು ಜಲಮೂಲಗಳ ದಂಡೆಗೆ ಅಥವಾ ಹೊರವಲಯದ ಜಮೀನುಗಳಿಗೆ ತೆರಳಿ ‘ಪರಿಸರ ಭೋಜನ’ಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಎಳ್ಳಮಾವಾಸ್ಯೆಯ ದಿನವಾದ ಬುಧವಾರವೂ ನೆರೆಹೊರೆಯವರಿಗೆ ರೊಟ್ಟಿ, ವಿವಿಧ ಪಲ್ಯಗಳು ಮತ್ತು ಸಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದು ಕಂಡುಬಂತು.

ಸಜ್ಜೆ, ಜೋಳದ ಖಡಕ್ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ವಿವಿಧ ಕಾಳುಗಳಿಂದ ಸಿದ್ಧಪಡಿಸಿದ ಪಲ್ಯ, ‌‌‌‌ಮೊಸರು, ಶೇಂಗಾ, ಗುರೆಳ್ಳು ಚಟ್ನಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಈ ಸಂದರ್ಭದಲ್ಲಿ ಸಿಗುವ ಅವರೆಕಾಳುಗಳು ಹಾಗೂ ಸೊಪ್ಪುಗಳಿಂದ ತಯಾರಿಸಿದ ಪಲ್ಯಗಳು, ಬೇಳೆ ಹೋಳಿಗೆ, ಕೆಂಪು ಚಟ್ನಿ, ಜುನಕದ ವಡೆ, ಮಾದೇಲಿ, ಮೊಸರನ್ನ, ಖರ್ಜಿಕಾಯಿ... ಹೀಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಈ ಹಬ್ಬದಲ್ಲಿ ತಯಾರಿಸಿ ಸವಿಯುತ್ತಾರೆ. ನೆರೆಹೊರೆಯ ಮನೆಗಳಿಗೂ ಹಂಚಿ ಖುಷಿಪಡುತ್ತಾರೆ.

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ... ಹೀಗೆ ನದಿ ತೀರದಲ್ಲಿರುವ ದೇವಸ್ಥಾನಗಳಿಗೆ ಜನರು ಭೇಟಿ ಕೊಡುತ್ತಾರೆ. ಸುಗ್ಗಿಯ ಸಮಯವಾದ್ದರಿಂದ ರೈತರಿಗೆ ಹೆಚ್ಚಿನ ಸಂತೋಷ. ಬೆಳೆಗಳಿಗೆ ಪೂಜೆ ಸಲ್ಲಿಸಿ, ಭೂಮಿ ತಾಯಿಗೂ ನಮಿಸುತ್ತಾರೆ. ಜಾನುವಾರು ಪೂಜೆ ಸಲ್ಲಿಸುತ್ತಾರೆ.

ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ, ರಕ್ಕಸಕೊಪ್ಪ ಜಲಾಶಯ, ಬೈಲಹೊಂಗಲ ತಾಲ್ಲೂಕಿನ ಸಿದ್ದನಕೊಳ್ಳ, ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ, ಅಸೋಗ, ಸವದತ್ತಿಯ ನವಿಲುತೀರ್ಥ ಜಲಾಶಯದ ಪ್ರದೇಶ, ಸೊಗಲ, ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಉದ್ಯಾನ ಹೀಗೆ ಮೊದಲಾದ ಕಡೆಗಳಲ್ಲಿ ನೂರಾರು ಮಂದಿ ಕುಟುಂಬ ಸಮೇತ ಕಾಣಸಿಗುತ್ತಾರೆ. ಮಹಿಳೆಯರು ಗಂಗೆಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಬುತ್ತಿ ಊಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.