ADVERTISEMENT

ಬೆಳಗಾವಿ | ಭಗವದ್ಗೀತೆ ಅಭಿಯಾನ ಯಶಸ್ವಿಗೊಳಿಸಿ: ಸ್ವರ್ಣವಲ್ಲೀ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:47 IST
Last Updated 6 ಅಕ್ಟೋಬರ್ 2023, 15:47 IST
<div class="paragraphs"><p>ಭಗವದ್ಗೀತೆ ಅಭಿಯಾನ ಕುರಿತು ಬೆಳಗಾವಿಯಲ್ಲಿ ಶುಕ್ರವಾರ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಮಾಹಿತಿ ನೀಡಿದರು</p></div>

ಭಗವದ್ಗೀತೆ ಅಭಿಯಾನ ಕುರಿತು ಬೆಳಗಾವಿಯಲ್ಲಿ ಶುಕ್ರವಾರ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಮಾಹಿತಿ ನೀಡಿದರು

   

ಬೆಳಗಾವಿ: ‘ನವೆಂಬರ್‌ 21ರಿಂದ ಡಿಸೆಂಬರ್‌ 23ರವರೆಗೆ ಬೆಳಗಾವಿ ಕೇಂದ್ರತವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಭಗವದ್ಗೀತೆ ಅಭಿಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಕರೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸರಣಿ ಸಭೆಗಳನ್ನು ನಡೆಸಿ ಮಾತನಾಡಿದ ಅವರು, ‘ಜನರನ್ನು ಮಾನಸಿಕವಾಗಿ ಸದೃಢಗೊಳಿಸುವ ಉದ್ದೇಶ ಭಗವದ್ಗೀತೆ ಅಭಿಯಾನದ ಹಿಂದಿದೆ. ಜಾತಿ, ಮತ, ಬೇಧವಿಲ್ಲದೆ, ಎಲ್ಲರನ್ನೂ ತಲುಪಬೇಕು. ಎಲ್ಲರನ್ನೂ ಒಳಗೊಂಡ ಸಮಿತಿಗಳನ್ನು ರಚಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದರು.

ADVERTISEMENT

‘ನವೆಂಬರ್ 21ರಂದು ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಡಿಸೆಂಬರ್ 23ರಂದು ಮಹಾಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳು, ಪ್ರಶಿಕ್ಷಣ ಸಮಿತಿ, ಪ್ರವಚನ ಸಮಿತಿ, ಸಂಪರ್ಕ ಸಮಿತಿ ರಚಿಸ ಲಾಗುತ್ತಿದೆ. ಒಂದು ತಿಂಗಳ ಕಾಲ ಶಾಲೆ- ಕಾಲೇಜುಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಗವದ್ಗೀತೆಯ 10ನೇ ಅಧ್ಯಾಯದ ಪಠಣ ನಡೆಯಲಿದೆ’ ಎಂದು ಶ್ರೀಗಳು ತಿಳಿಸಿದರು.

‘ಕಳೆದ 17 ವರ್ಷಗಳಿಂದ ಭಗವದ್ಗೀತೆ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದ್ದು, ಈಗ ಭಗವದ್ಗೀತೆ ಎಲ್ಲರ ಮನಸ್ಸಿಗೆ ಬಂದಿದೆ. ಎಲ್ಲರಲ್ಲೂ ಶ್ರದ್ಧೆ ಬಂದಿದೆ. ಈ ಬಾರಿಯದ್ದು ಹಿಂದಿನ ಅಭಿಯಾನಗಳಿಗಿಂತ ಯಶಸ್ವಿ ಅಭಿಯಾನವಾಗಬೇಕು. ಕಾರ್ಯಕರ್ತರ ಸಂಖ್ಯೆ ಹಾಗೂ ಪ್ರಶಿಕ್ಷಕರ ಸಂಖ್ಯೆ ಸಾಧ್ಯವಾದಷ್ಟು ಹೆಚ್ಚಾಗಬೇಕು. ಎಲ್ಲರನ್ನೂ ಸೇರಿಸಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.