ಎಂ.ಕೆ.ಹುಬ್ಬಳ್ಳಿ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಮಲಪ್ರಭಾ ನದಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.
ಈಗಾಗಲೇ ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಕೆಳಮಟ್ಟದ ಹಳೆಯ ಸೇತುವೆ ಮುಳುಗಿದ್ದು, ಮಂಗಳವಾರ ಒಡಲು ಭರ್ತಿಯಾಗಿ ಸಮೀಪದ ಕೃಷಿ ಜಮೀನುಗಳಿಗೂ ಮಲಪ್ರಭೆಯ ನೀರು ಆವಸಿಕೊಂಡಿದ್ದು, ಬೆಳೆ ಹಾಳಾಗುವ ಭೀತಿ ರೈತರನ್ನು ಕಾಡಲಾರಂಭಿಸಿದೆ.
ತಹಶೀಲ್ದಾರ ಭೇಟಿ: ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿಯ ಮಲಪ್ರಭಾ ನದಿ ತೀರಕ್ಕೆ ಕಿತ್ತೂರ ತಹಶೀಲ್ದಾರ್ ಕಲಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ವಿಠ್ಠಲ-ರುಕ್ಮೀಣಿ ಮಂದಿರ, ಶರಣೆ ಗಂಗಾಂಬಿಕಾ ಐಕ್ಯಮಂಟಪ, ಶ್ರೀ ಅಶ್ವತ್ಥ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ನದಿ ತೀರವನ್ನು ಪರಿಶೀಲಿಸಿದರು. ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಮುಂಜಾಗ್ರತ ಕ್ರಮವಾಗಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ನದಿ ತೀರದ ನಿವಾಸಿಗಳಿಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಆಡಳಿತಾಧಿಕಾರಿ ಕಚೇರಿಯಿಂದ ತಿಳಿವಳಿಕೆ ನೀಡಲಾಯಿತು.
ವೀರಾಪೂರ, ಅಮರಾಪೂರ ಮತ್ತು ಎಂ.ಕೆ.ಹುಬ್ಬಳ್ಳಿ-ಅಮರಾಪೂರ ನಡುವಿನ ಹಳ್ಳ ಪರಿಶೀಲಿಸಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಕಂದಾಯ ನಿರೀಕ್ಷಕ ಎಂ.ಎಂ.ನಿರಲಗಿ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಕೊಂಡಿಕೊಪ್ಪ, ರವಿ ಯಲ್ಲಗೌಡ್ರ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ಕವಿತಾ ನಾಗನೂರ, ಮಲ್ಲಿಕಾರ್ಜುನ ತಿಗಡಿ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.