ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಪ್ರತಿಷ್ಠಿತ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ನಿರೀಕ್ಷೆಯಂತೆ ನಾಸೀರ ಬಾಗವಾನ್ ಮತ್ತು ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಅರಳಿಕಟ್ಟಿ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಬಾಗವಾನ್ ಅವರ ಹೆಸರನ್ನು ಶಿವಪ್ಪ ದೂರಪ್ಪನವರ ಸೂಚಿಸಿದರೆ, ಅಶೋಕ ಬೆಂಡಿಗೇರಿ ಅನುಮೋದಿಸಿದರು. ಲಕ್ಷ್ಮಿ ಅವರ ಹೆಸರನ್ನು ಅಶೋಕ ಯಮಕನಮರ್ಡಿ ಸೂಚಿಸಿದರು. ಬಸವರಾಜ ಬೆಂಡಿಗೇರಿ ಅನುಮೋದಿಸಿದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಚುನಾವಣಾ ಅಧಿಕಾರಿಯಾಗಿದ್ದರು.
ವಾರದಲ್ಲಿ ಬಾಕಿ ಬಿಲ್ ಚುಕ್ತಾ: 2019-20ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಬಾಕಿ ಉಳಿದಿರುವ ಬಿಲ್ ಅನ್ನು ಇನ್ನೊಂದು ವಾರದಲ್ಲಿ ಒಂದೇ ಕಂತಿನಲ್ಲಿ ಪಾವತಿ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ನಾಸೀರ ಬಾಗವಾನ್ ಘೋಷಿಸಿದರು. ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಹಣದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. ಪ್ರಸಕ್ತ ಕಬ್ಬು ಹಂಗಾಮಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು 200 ಕಬ್ಬು ಕಟಾವ್ ಗ್ಯಾಂಗ್ ಬರಲಿವೆ ಎಂದು ಮಾಹಿತಿ ನೀಡಿದರು. ಕಿತ್ತೂರು ಚನ್ನಮ್ಮನ ನಾಡಾಗಿರುವುದರಿಂದ ಮಹಿಳೆಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಕಾರಣಕ್ಕೆ ಲಕ್ಷ್ಮಿ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ನಿರ್ದೇಶಕರಾದ ಅಶೋಕ ಯಮಕನಮರ್ಡಿ, ಅಶೋಕ ಬೆಂಡಿಗೇರಿ, ಶಂಕರಗೌಡ ಪಾಟೀಲ, ಮಂಜುಗೌಡ ಪಾಟೀಲ, ಲಕ್ಷ್ಮಣ ಎಮ್ಮಿ, ಸಾವಂತ ಕಿರಬನವರ, ಶಿವಪ್ಪ ದೂರಪ್ಪನವರ, ಭರತೇಶ ಶೇಬಣ್ಣವರ, ಮೀನಾಕ್ಷಿ ನೆಲಗಳಿ, ಜ್ಯೋತಿಬಾ ಹೈಬತ್ತಿ, ಬಸವರಾಜ ಬೆಂಡಿಗೇರಿ, ಬಸವರಾಜ ದುಂಡಿ, ಬಸವರಾಜ ಪುಂಡಿ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಇದ್ದರು.
ಬೆಂಬಲಿಗರ ಅಸಮಾಧಾನ: ಚುನಾವಣೆಯಲ್ಲಿ ಮಾತು ಕೊಟ್ಟಂತೆ ದಾಸ್ತಿಕೊಪ್ಪ ಗ್ರಾಮದ ನಿರ್ದೇಶಕ ಮಂಜುಗೌಡ ಪಾಟೀಲ ಅವರನ್ನು ಉಪಾಧ್ಯಕ್ಷರಾಗಿ ಮಾಡಬೇಕಿತ್ತು ಎಂದು ಅವರ ಬೆಂಬಲಿಗರು ಗಲಾಟೆ ಮಾಡಿದ ಪ್ರಸಂಗ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆಯಿತು. ಸ್ವತಃ ಮಂಜುಗೌಡ ಬೆಂಬಲಿಗರನ್ನು ಸಮಾಧಾನ ಪಡಿಸಿದರು. ಮುಂದೆ ನನಗೆ ಅವಕಾಶ ಸಿಗಲಿದೆ. ಈ ಬಾರಿಯ ಕಬ್ಬು ಹಂಗಾಮು ಯಶಸ್ವಿಗೊಳಿಸೋಣ ಎಂದು ವಿನಂತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.