ADVERTISEMENT

ಮಲಪ್ರಭಾ ಕಾರ್ಖಾನೆ: ಚನ್ನರಾಜ ಗುಂಪಿಗೆ ಜಯ

ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ ನೇತೃತ್ವದ ಎಲ್ಲ 15 ಸ್ಥಾನಗಳಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:57 IST
Last Updated 30 ಸೆಪ್ಟೆಂಬರ್ 2025, 6:57 IST
ಸಹೋದರನ ನೇತೃತ್ವದ ಪೆನಲ್ ಗೆಲುವು ಸಾಧಿಸುತ್ತಿದ್ದಂತೆ ಸಹೋದರನೊಂದಿಗೆ ಸಂಭ್ರಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸಹೋದರನ ನೇತೃತ್ವದ ಪೆನಲ್ ಗೆಲುವು ಸಾಧಿಸುತ್ತಿದ್ದಂತೆ ಸಹೋದರನೊಂದಿಗೆ ಸಂಭ್ರಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್   

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಸಚಿವೆ ಹೆಬ್ಬಾಳಕರ ಸಹೋದರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ‘ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಃಶ್ಚೇತನ ರೈತರ ಪೆನಲ್’ ಭರ್ಜರಿ ಗೆಲುವು ಸಾಧಿಸಿದೆ.

ಭಾನುವಾರ ಮತದಾನ ನಡದಿದ್ದು, ತಡರಾತ್ರಿವರೆಗೂ ಮತ ಎಣಿಕೆ ನಡೆಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ತಡರಾತ್ರಿಯವರೆಗೂ ಕಾರಿನಲ್ಲೇ ಕಾದು ಕುಳಿತರು.

ಕಾರ್ಖಾನೆ ಮಾಜಿ ಅಧ್ಯಕ್ಷ ನಾಸಿರ್ ಬಾಗವಾನರ ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ ಗುಂಪು ಮತ್ತು ರೈತಸಂಘದ ಮುಖಂಡ ಬಸವರಾಜ ಮೋಕಾಶಿ ನೇತತ್ವದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವದ್ಧಿ ಗುಂಪು ಸ್ಪರ್ಧೆಗಿಳಿದಿದ್ದರಿಂದ ಚುನಾವಣೆ ಪೈಪೋಟಿಯಿಂದ ಕೂಡಿತ್ತು.

ವಿಜೇತರು: ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಚನ್ನರಾಜ ಬಸವರಾಜ ಹಟ್ಟಿಹೊಳಿ (4731 ಮತ), ಶ್ರೀಕಾಂತ ಇಟಗಿ (4424), ಶಿವನಗೌಡ ಪಾಟೀಲ (4349), ಶಂಕರ ಪರಪ್ಪ ಕಿಲ್ಲೇದಾರ (4245), ಶ್ರೀಶೈಲ ಬಸಪ್ಪ ತುರಮರಿ (4183), ಶಿವಪುತ್ರಪ್ಪ ಮರಡಿ (3838), ರಘು ಚಂದ್ರಶೇಖರ ಪಾಟೀಲ (3829), ರಾಮನಗೌಡ ಪಾಟೀಲ (3735), ಸುರೇಶ ಹುಲಿಕಟ್ಟಿ (3668), ಫಕ್ಕೀರಪ್ಪ ಸಕ್ರೆಣ್ಣವರ (4142– ಪ್ರವರ್ಗ-ಅ), ಶಂಕರೆಪ್ಪ ಹೊಳಿ (4507– ಪ್ರವರ್ಗ-ಬ), ಲಲಿತಾ ಭಾಲಚಂದ್ರ ಪಾಟೀಲ (4041) ಹಾಗೂ ಸುನಿತಾ ಮಹಾಂತೇಶ ಲಂಗೋಟಿ (3913– ಮಹಿಳಾ ಮತಕ್ಷೇತ್ರ), ಬಾಳಪ್ಪ ದುರಗಪ್ಪ ಪೂಜಾರ (3827– ಪರಿಶಿಷ್ಟ ಜಾತಿ) ಹಾಗೂ ಭರಮಪ್ಪ ಶಿಗೆಹಳ್ಳಿ (4161– ಪರಿಶಿಷ್ಟ ಪಂಗಡ).

ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಆಡಳಿತ: ಸಚಿವೆ

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ ಗುಲಾಲ್ ಹಚ್ಚಿಕೊಂಡು ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ‘ರೈತರು ನಮ್ಮ ಮೇಲೆ ವಿಶ್ವಾಸವಿಟ್ಟು ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಎಲ್ಲ ಕಾರ್ಮಿಕರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ವಿಶ್ವಾಸಕ್ಕೆ ಚ್ಯುತ್ತಿ ಬಾರದಂತೆ ಆಡಳಿತ ನಡೆಸುತ್ತೇವೆ’ ಕಾರ್ಖಾನೆಯನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತೇವೆ’ ಎಂದರು. ‘ಮಲಪ್ರಭಾ ಸಕ್ಕರೆ ಕಾರ್ಖಾನೆ ಏಷ್ಯಾದಲ್ಲೇ ನಂಬರ್‌ ಒನ್‌ ಕಾರ್ಖಾನೆ ಆಗಿತ್ತು. ಹೊಸ ಆಡಳಿತ ಮಂಡಳಿ ಕಾರ್ಖಾನೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಈ ಭಾಗದ ಜೀವನಾಡಿಯಾಗಿರುವ ಮಲಪ್ರಭಾ ಕಾರ್ಖಾನೆಯ ಅಭಿವೃದ್ದಿಯೇ ನಮ್ಮ ತಂಡದ ಗುರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.